ಡೆಹ್ರಾಡೂನ್: ಉತ್ತರಾಖಂಡ ಹೈಕೋರ್ಟ್ ಹಿಂದುಗಳ ಪವಿತ್ರ ನದಿ ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳಿಗೆ ಜೀವಂತ ವ್ಯಕ್ತಿಯ ಮಾನ್ಯತೆ ನೀಡಿದೆ.
ಭಾರತದಲ್ಲಿ ನದಿಗಳಿಗೆ ಮಾನವ ಜೀವಿಯ ಸ್ಥಾನಮಾನ ನೀಡುತ್ತಿರುವುದು ಇದೇ ಮೊದಲು. ನ್ಯೂಜಿಲೆಂಡ್ ನ ವಾಂಗನುಯಿ ನದಿಗೆ ಇಂತಹುದ್ದೇ ಸ್ಥಾನಮಾನ ನೀಡಲು ಅಲ್ಲಿನ ಸಂಸತ್ತು ಕಳೆದ ಬುಧವಾರವಷ್ಟೇ ಮಸೂದೆ ಅಂಗೀಕರಿಸಿತ್ತು.
ವಾಂಗನುಯಿ ನದಿ ನಂತರ ಇದೀಗ ಅಂತಹ ಮಾನ್ಯತೆ ಪಡೆದ ವಿಶ್ವದ ಎರಡನೇ ನದಿಗಳು ಎಂಬ ಹಿರಿಮಿಗೆ ಗಂಗಾ, ಯಮುನಾ ಪಾತ್ರವಾಗಿವೆ. ಗಂಗಾನದಿ 2500 ಕಿ.ಮೀ, ಯಮುನಾ 960 ಕಿ.ಮೀ ದೂರ ಹರಿಯುತ್ತದೆ. ಇದಕ್ಕೆ ಹೋಲಿಸಿದರೆ ವಾಂಗನುಯಿ ಚಿಕ್ತದಾಗಿದ್ದು ಕೇವಲ 145 ಕಿ.ಮೀ ದೂರದವರೆಗೆ ಹರಿಯುತ್ತದೆ.
ಗಂಗಾ ಮತ್ತು ಯಮುನಾ ನದಿಯನ್ನು ಸ್ವಚ್ಛಗೊಳಿಸಿ, ಉತ್ತಮವಾಗಿ ನಿರ್ವಹಿಸಲು ಗಂಗಾ ಆಡಳಿತ ಮಂಡಳಿಯನ್ನು ಅಸ್ತಿತ್ವಕ್ಕೆ ತರುವಂತೆಯೂ ಉತ್ತರಾಖಂಡ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.
ಈ ಎರಡು ನದಿಗಳು ಜೀವಂತ ವ್ಯಕ್ತಿಯ ಸ್ಥಾನಮಾನ ಪಡೆದಿರುವುದರಿಂದ ಯಾರಾದರೂ ಮಲಿನಗೊಳಿಸಲು ಯತ್ನಿಸಿದರೆ, ಮಾನವರಿಗೆ ಹಾನಿ ಮಾಡಿದಷ್ಟೇ ಅಪರಾಧ ಎನಿಸಿಕೊಳ್ಳಲಿದೆ.