ಪಾಟ್ನಾ: ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ ಚುನಾವಣೆಯನ್ನು ನಡೆಸುವ ನೀತಿ ಆಯೋಗದ ಪ್ರಸ್ತಾವನೆಯನ್ನು ಆರ್ ಜೆಡಿ ಪಕ್ಷದ ನಾಯಕ ಲಾಲು ಪ್ರಸಾದ್ ಯಾದವ್ ಟೀಕಿಸಿದ್ದು, ನೀತಿ ಆಯೋಗದ ಪ್ರಸ್ತಾವನೆ ಪ್ರಾದೇಷಿಕ ಪಕ್ಷಗಳಿಗೆ ಮಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೀತಿ ಆಯೋಗದ ಪ್ರಸ್ತಾವನೆ ಪ್ರಾದೇಶಿಕ ನಾಯಕತ್ವವನ್ನು ನಾಶ ಮಾಡುವ ಯತ್ನವಾಗಿದ್ದು, ಈ ಪ್ರಸ್ತಾವನೆ ಜಾರಿಯಾದಲ್ಲಿ ಕೇವಲ ಮೇಲ್ಮಧ್ಯಮ ವರ್ಗದವರಿಗೆ ಮಾತ್ರ ಉಪಯೋಗವಾಗಲಿದೆ, ಮಧ್ಯಮ ಹಾಗೂ ಬಡವರ ಕಥೆ ಏನು? ಆ ವರ್ಗಗಳನ್ನು ಏಕೆ ಪರಿಗಣಿಸುತ್ತಿಲ್ಲ ಎಂದು ಲಾಲೂ ಪ್ರಸಾದ್ ಯಾದವ್ ಪ್ರಶ್ನಿಸಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧವೂ ಟೀಕಾಪ್ರಹಾರ ನಡೆಸಿರುವ ಲಾಲೂ ಪ್ರಸಾದ್ ಯಾದವ್, ಯೋಗಿ ಆದಿತ್ಯನಾಥ್ ರಾತ್ರೋರಾತ್ರಿ ರಾಜ್ಯದ ಅಭಿವೃದ್ಧಿ ಮಾಡಬಹುದು ಎಂದು ಕೊಂಡಿದ್ದರೆ ಅದು ತಪ್ಪು ಕಲ್ಪನೆ. ಆರ್ ಜೆಡಿ ಪಕ್ಷ ಹಾಗೂ ರಾಜ್ಯವನ್ನು ಬೆಳವಣಿಗೆಯ ಕಡೆಗೆ ಒಗ್ಗೂಡಿಸಿತ್ತು. ಆದರೆ ಯೋಗಿ ಆದಿತ್ಯನಾಥ್ ರಾತ್ರೋ ರಾತ್ರಿ ರಾಜ್ಯದ ಅಭಿವೃದ್ಧಿ ಮಾಡಿ ಅದ್ಭುತಗಳನ್ನು ಸೃಷ್ಟಿಸುತ್ತೇವೆ ಎಂದುಕೊಳ್ಳುವುದು ತಪ್ಪು ಎಂದು ಯಾದವ್ ಅಭಿಪ್ರಾಯಪಟ್ಟಿದ್ದಾರೆ.