ಬಿಲ್ಕಿಸ್ ಬಾನು
ಬಿಲ್ಕಿಸ್ ಬಾನು

ನನಗೆ ನ್ಯಾಯ ಬೇಕಿತ್ತು, ಪ್ರತೀಕಾರ ಅಲ್ಲ: ಬಿಲ್ಕಿಸ್ ಬಾನು

2002ರ ಗುಜರಾತ್‌ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಇಡೀ ಕುಟುಂಬ ಕಳೆದುಕೊಂಡಿದ್ದ ಬಿಲ್ಕಿಸ್ ಬಾನು ಅವರು....
Published on
ನವದೆಹಲಿ: 2002ರ ಗುಜರಾತ್‌ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಇಡೀ ಕುಟುಂಬ ಕಳೆದುಕೊಂಡಿದ್ದ ಬಿಲ್ಕಿಸ್ ಬಾನು ಅವರು ಈಗ ಹೊಸ ಜೀವನ ಆರಂಭಿಸಿದ್ದು, ತಮ್ಮ ಹಿರಿಯ ಮಗಳನ್ನು ನ್ಯಾಯವಾದಿಯನ್ನಾಗಿ ಮಾಡುವ ವಿಶ್ವಾಸದಲ್ಲಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣದ 12 ಅಪರಾಧಿಗಳಿಗೆ ವಿಚಾರಣಾಧೀನ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ ಎತ್ತಿಹಿಡಿದ ನಾಲ್ಕು ದಿನಗಳ ನಂತರ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಲ್ಕಿಸ್ ಬಾನು, ನನಗೆ ನ್ಯಾಯ ಬೇಕಿತ್ತು. ಪ್ರತೀಕಾರ ಅಲ್ಲ ಎಂದು ಹೇಳಿದ್ದಾರೆ.
ಬಾಂಬೆ ಹೈಕೋರ್ಟ್ ತೀರ್ಪು ಉತ್ತಮವಾಗಿದ್ದು, ಆ ತೀರ್ಪಿನಿಂದ ನನಗೆ ಖುಷಿಯಾಗಿದೆ. ಈ ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಿದ ಪೊಲೀಸರಿಗೆ ಮತ್ತು ವೈದ್ಯರಿಗೂ ಶಿಕ್ಷೆಯಾಗಿರುವುದರಿಂದ ನನಗೆ ಹೆಚ್ಚು ಸಂತೋಷವಾಗಿದೆ ಎಂದು ಬಾನು ತಿಳಿಸಿದ್ದಾರೆ.
ನನ್ನ ಹಿರಿಯ ಮಗಳು ವಕೀಲೆಯಾಗಬೇಕು ಎಂದು ಬಯಸಿದ್ದೇನೆ. ನನ್ನ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ನಾನು ಹೊಸ ಜೀವನ ಆರಂಭಿಸಿದ್ದೇನೆ ಎಂದು ಹೇಳಿದ್ದಾರೆ.
2002ರ ಮಾರ್ಚ್ 3ರಂದು ಗುಜರಾತ್ ನ ದಾವೊದ್ ಜಿಲ್ಲೆಯ ದೇವ್ ಗರ್ ಬರಿಯಾ ಗ್ರಾಮದಲ್ಲಿ 19 ವರ್ಷದ ಬಿಲ್ಕಿಸ್ ಬಾನು ಎಂಬ ಗರ್ಭಿಣಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯ 3 ವರ್ಷದ ಮಗಳು ಸೇರಿದಂತೆ ಕುಟುಂಬದ 14 ಮಂದಿಯನ್ನು ಬರ್ಬರವಾಗಿ ಹತ್ಯೆಗೈದಿದ್ದರು. ಘಟನೆಯಲ್ಲಿ ಬಿಲ್ಕಿಸ್ ಹಾಗೂ ಕುಟುಂಬದ ಮಾಸ್ಟರ್ ಹುಸೈನ್ ಮತ್ತು ಸದ್ದಾಂ ಬದುಕುಳಿದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com