ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಮಧ್ಯಪ್ರದೇಶದ ಚತ್ತಾರ್ಪುರ್ ಜಿಲ್ಲೆಯ ಜನರು ಅನಿರೀಕ್ಷಿತ ಸಮಸ್ಯೆಯೊಂದಕ್ಕೆ ಸಿಲುಕಿದ್ದಾರೆ. ಬರ ಪರಿಸ್ಥಿತಿಯಿಂದಾಗಿ ಹಳ್ಳಿಯ ಯುವಕರಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರಂತೆ.
ಚತ್ತಾರ್ಪುರ್ ಜಿಲ್ಲೆಯ ಬುಕ್ಸಾವ್ ಗ್ರಾಮದ ಹೆಣ್ಣುಗಳಿಗೆ ಗಂಡು, ಗಂಡುಗಳಿಗೆ ಹೆಣ್ಣು ಸಿಗದಂತಾ ಪರಿಸ್ಥಿತಿ ಎದುರಾಗಿದೆ. ಈ ಗ್ರಾಮ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ ಎಂದು ತಿಳಿದ ಹೆಣ್ಣಿನ ಪೋಷಕರು ತಮ್ಮ ಮಗಳನ್ನು ಮದುವೆ ಮಾಡಲು ಹಿಂದೇಟು ಹಾಕಿದ್ದು ಗ್ರಾಮದ ಯುವಕನ ಮದುವೆ ಮುರಿದುಬಿದ್ದಿದೆ.
ಬುಕ್ಸಾವ್ ಗ್ರಾಮದಲ್ಲಿ ಸರಿಸುಮಾರು ಒಂದು ಸಾವಿರ ಮಂದಿ ವಾಸಿಸುತ್ತಿದ್ದಾರೆ. ಇಲ್ಲಿ ಈ ಮೊದಲು ಎರಡು ಕೈ ಪಂಪುಗಳಿದ್ದು ಇದೀಗ ಅವುಗಳು ಒಣಗಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ನೀರು ತರಲು ದೂರಕ್ಕೆ ಹೋಗಬೇಕಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಈ ಹಳ್ಳಿಯ ಯುವಕರಿಗೆ ಹೆಣ್ಣುಗಳನ್ನು ನೀಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ನೀರಿನ ಕೊರತೆ ಹಿನ್ನೆಲೆಯ ಇತ್ತೀಚೆಗಷ್ಟೇ ಇಲ್ಲಿನ ನಿವಾಸಿ ಜಾಸು ಹರಿವಾಲ್ ಅವರ ಪುತ್ರನ ಮದುವೆ ಮುರಿದುಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹರಿವಾಲ್ ವಧುವಿನ ಪೋಷಕರಿಗೆ ತಮ್ಮ ಮಗಳನ್ನು ನನ್ನ ಮಗನಿಗೆ ಮದುವೆ ಮಾಡಿಕೊಡಲು ತೀರ್ಮಾನಿಸಿದ್ದರು. ಆದರೆ ನೀರಿನ ಸಮಸ್ಯೆ ಎದುರಾಗಿದೆ ಎಂದು ತಿಳಿದ ವಧುವಿನ ಪೋಷಕರು ಮದುವೆಯನ್ನು ರದ್ದು ಮಾಡಿದರು ಎಂದು ಹೇಳಿದ್ದಾರೆ.