ಚಂಡಿಗಢ: ಹರಿಯಾಣದ ಸೋನೆಪತ್ ನ 23 ವರ್ಷದ ದಲಿತ ಮಹಿಳೆ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸೋಮವಾರ ತಿಳಿಸಿದ್ದಾರೆ.
'ನಾಗರಿಕ ಸಮಾಜದಲ್ಲಿ ನಡೆಯುವ ಅತ್ಯಂತ ಅಮಾನವೀಯ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಖಟ್ಟರ್ ಹೇಳಿದ್ದಾರೆ.
ರೋಹಟಕ್ ನಲ್ಲಿ ಕಳೆದ ಮೇ 9ರಂದು ಕೆಲಸಕ್ಕೆ ತೆರಳುತ್ತಿದ್ದ ಯುವತಿಯನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಏಳು ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಮೇ 11ರಂದು ಯುವತಿ ವಿರೂಪಗೊಂಡ ಮೃತದೇಹ ಪತ್ತೆಯಾಗಿತ್ತು.
ಮದುವೆಗೆ ನಿರಾಕರಿಸಿದ ಯುವತಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಗುಪ್ತಾಂಗಕ್ಕೆ ಚೂಪಾದ ವಸ್ತುಗಳನ್ನು ತೂರಿರುವ ಅತ್ಯಾಚಾರಿಗಳು, ಬಳಿಕ ಯುವತಿಯ ಗುರುತು ಸಿಗಬಾರದೆಂದು ತಲೆಯ ಮೇಲೆ ವಾಹನ ಹರಿಸಿದ್ದಾರೆ.
ಪ್ರಕರಣದ ತನಿಖೆಗೆ ಹರಿಯಾಣ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದ್ದು, ಈಗಾಗಲೇ ಪ್ರಮುಖ ಆರೋಪಿ ಸುಮಿತ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.