ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ, ಚಿದಂಬರಂ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಖಾಸಗಿಯಾಗಿ ಅಕ್ರಮ ಹಣ ವರ್ಗಾವಣೆ ಮಾಡುವವರು ಎಂದು ಟೀಕಿಸಿದ್ದಾರೆ.
ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದ ಅವರು, ವಿದೇಶಿ ಹೂಡಿಕೆ ಪ್ರಚಾರ ಮಂಡಳಿ ಅನುಮೋದನೆಯನ್ನು ಚಿದಂಬರಂ ತಮ್ಮ ಮಗನ ಲಾಭಕ್ಕಾಗಿ ನೀಡಿದರು ಎಂದರು.
ಚಿದಂಬರಂ ಅತ್ಯಂತ ಭ್ರಷ್ಟ ವ್ಯಕ್ತಿ. ಅವರು ಸೋನಿಯಾ ಗಾಂಧಿಗೆ ಕೂಡ ಅಕ್ರಮವಾಗಿ ಹಣ ಸಾಗಿಸುವವರು. ಅವರು ಸಚಿವರಾಗಿದ್ದಾಗ ಎಲ್ಲಾ ಕಾನೂನುಗಳನ್ನು ಮುರಿದಿದ್ದರು. ತಮ್ಮ ಮಗನಿಗೆ ಲಂಚ ಪಡೆಯಲು ಅನುಕೂಲವಾಗಲೆಂದು ಎಫ್ಐಪಿಬಿ ಅನುಮೋದನೆ ಪಡೆದರು.
ಇಂತವರಿಗೆ ಶಿಕ್ಷೆಯಾಗಬೇಕು, ಏಕೆಂದರೆ ಭವಿಷ್ಯದಲ್ಲಿ ಸಚಿವರುಗಳು ಇಂತಹ ನೀಚ ಕೆಲಸ ಮಾಡಲು ಹಿಂಜರಿಯುತ್ತಾರೆ ಎಂದು ಹೇಳಿದರು.
ಹಣಕಾಸು ಇಲಾಖೆಯ ಕೆಲವು ಅಧಿಕಾರಿಗಳು ಚಿದಂಬರಂ ಪರವಾಗಿ ಇದ್ದಾರೆ ಎಂದು ಕೂಡ ಸುಬ್ರಹ್ಮಣ್ಯನ್ ಸ್ವಾಮಿ ಆರೋಪಿಸಿದರು.