ಲಕ್ನೋ: ಗಲಭೆಪೀಡಿತ ಸಹಾರನಾಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಉತ್ತರ ಪ್ರದೇಶ ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸೀನಿಯರ್ ಸೂಪರಿಂಡೆಂಟ್ ಆಪ್ ಪೊಲೀಸ್ ಸುಭಾಷ್ ಚಂದ್ರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಮುಜಾಫರ್ ನಗರದ ಎಸ್ ಎಸ್ ಪಿ ಬಬ್ಲೂ ಕುಮಾರ್ ಅವರನ್ನು ಸಹರಾನಪುರಕ್ಕೆ ನಿಯೋಜಿಸಲಾಗಿದೆ. ಪ್ರಮೋದ್ ಕುಮಾರ್ ಪಾಂಡೆ ಅವರನ್ನು ನೂತನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಮಾಡಲಾಗಿದೆ.
ತಕ್ಷಣದಿಂದಲೇ ಅಧಿಕಾರ ಕೈಗೊಳ್ಳುವಂತೆ ಪಾಂಡೆ ಅವರನ್ನು ನಿನ್ನೆ ಸಂಜೆ ರಾಜ್ಯ ವಿಮಾನದಲ್ಲಿ ಸಹಾರನಪುರಕ್ಕೆ ಕಳುಹಿಸಲಾಗಿದೆ. ಪಾಂಡೆ ಲಕ್ನೋದಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಈ ಮೊದಲು ಜಿಲ್ಲಾಡಳಿತ ಮೂರು ಎಫ್ ಐ ಆರ್ ಗಳನ್ನು ದಾಖಲಿಸಿ, 24 ಮಂದಿಯನ್ನು ಮಂಗಳವಾರ ಬಂಧಿಸಿತ್ತು. ಗಲಭೆಯಲ್ಲಿ ಮೃತಪಟ್ಟ ಆಶಿಶ್ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ 15 ಲಕ್ಷ ರು ಧನ ಸಹಾಯ ನೀಡಿದೆ. ಗಾಯಾಳುಗಳಿಗೆ ತಲಾ 50 ಸಾವಿರ ರು ಪರಿಹಾರ ಹಣ ಘೋಷಿಸಿದೆ.
ಬುಧವಾರ ಬೆಳಗ್ಗೆ ನನೊಟಾ ಬಡಗಾನ್ ಪ್ರದೇಶದಲ್ಲಿ ಹಿಂಸಾಚಾರ ಮರುಕಳಿಸಿದ್ದು, ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ. ಆದರೆ ಹಿಂಸಾಚಾರಕ್ಕೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.