ನವದೆಹಲಿ: 10 ಕೋಟಿ ರುಪಾಯಿ ಅಕ್ರಮ ಆಸ್ತಿ ಗಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿದ್ದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಹಾಗೂ ಇತರರಿಗೆ ಸೋಮವಾರ ಸಿಬಿಐ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ವೀರಭದ್ರ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಒಂದು ಲಕ್ಷ ರುಪಾಯಿ ಸ್ಯೂರಿಟಿ ಮೇಲೆ ಕೋರ್ಟ್ ಜಾಮೀನು ನೀಡಿ ಆದೇಶಿಸಿದೆ.
ಇತರೆ ಆರೋಪಿಗಳಾದ ಎಲ್ಐಸಿ ಏಜೆಂಟ್ ಆನಂದ್ ಚೌವ್ಹಾಣ್, ಆತನ ಸಹಚರರಾದ ಚುನ್ನಿ ಲಾಲ್, ಜೋಗಿಂದರ್ ಸಿಂಗ್ ಘಲ್ಟಾ, ಪ್ರೇಮ್ ರಾಜ್, ಲಾವನ್ ಕುಮಾರ್ ರೋಚ್, ವಕಮುಲ್ಲಾ ಚಂದ್ರೇಶಕರ್ ಮತ್ತು ರಾಮ್ ಪ್ರಕಾಶ್ ಭಾಟಿಯಾ ಅವರಿಗೆ ಕೋರ್ಟ್ ಜಾಮೀನು ನೀಡಿದೆ.
ವೀರಭದ್ರ ಸಿಂಗ್ ಅವರು ಕೇಂದ್ರ ಉಕ್ಕು ಸಚಿವರಾಗಿದ್ದ ವೇಳೆ 2009ರಿಂದ-2011ರವರೆಗೆ ತಮ್ಮ ಆದಾಯಕ್ಕಿಂತಲೂ ಶೇ.192ರಷ್ಟು ಅಧಿಕ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ ಆರೋಪ ಎದುರಿಸುತ್ತಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹಿಮಾಚಲ ಸಿಎಂ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.