ಮುಂದಿನ ವರ್ಷದಿಂದ ಹಜ್ ಸಬ್ಸಿಡಿಗೆ ಕತ್ತರಿ: ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು

ಹಜ್ ಯಾತ್ರೆಗೆ ತೆರಳುತ್ತಿದ್ದವರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಮುಂದಿನ ವರ್ಷದಿಂದ ಕೇಂದ್ರ ಸರ್ಕಾರ ತೆಗೆದುಹಾಕಲಿದೆ. ಕಳೆದ ಜನವರಿಯಲ್ಲಿ ಸ್ಥಾಪಿಸಲಾಗಿದ್ದ ವಿಶೇಷ ಸಮಿತಿ ಹಜ್ ಯಾತ್ರೆಯ ಸಬ್ಸಿಡಿಯನ್ನು ತೆಗೆದು ಹಾಕುವಂತೆ ಶಿಫಾರಸು ಮಾಡಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಹಜ್ ಯಾತ್ರೆಗೆ ತೆರಳುತ್ತಿದ್ದವರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಮುಂದಿನ ವರ್ಷದಿಂದ ಕೇಂದ್ರ ಸರ್ಕಾರ ತೆಗೆದುಹಾಕಲಿದೆ. ಕಳೆದ ಜನವರಿಯಲ್ಲಿ ಸ್ಥಾಪಿಸಲಾಗಿದ್ದ ವಿಶೇಷ ಸಮಿತಿ ಹಜ್ ಯಾತ್ರೆಯ ಸಬ್ಸಿಡಿಯನ್ನು ತೆಗೆದುಹಾಕುವಂತೆ ಶಿಫಾರಸು ಮಾಡಿದೆ.
ಹಜ್ ಸಬ್ಸಿಡಿ ಹಣವನ್ನು ದೇಶದಲ್ಲಿನ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮತ್ತು ಶಿಕ್ಷಣ ಸಬಲೀಕರಣಕ್ಕೆ ಬಳಸಲು ಸರ್ಕಾರ ನಿರ್ಧರಿಸಿದೆ. 
ಸರ್ಕಾರದ ಈ ನಿರ್ಧಾರಕ್ಕೆ ಭಾರತದ ಹಜ್ ಸಮಿತಿ ಬಲವಾಗಿ ಖಂಡಿಸಿದ್ದು, 2012ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಸಬ್ಸಿಡಿಯನ್ನು ಹಂತ ಹಂತವಾಗಿ 2022ರ ವೇಳೆಗೆ ತೆಗೆದು ಹಾಕುವಂತೆ ಕೋರಿದೆ.
ಹಜ್ ಯಾತ್ರಿಕರಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ತೆಗೆದುಹಾಕುವ ಕುರಿತು ಮತ್ತು ಹೊಸ ಹಜ್ ನೀತಿ ಬಗ್ಗೆ ವಿಮರ್ಶಾ ಸಭೆ ನಿನ್ನೆ ದೆಹಲಿಯಲ್ಲಿ ನಡೆಯಿತು. ಅಲ್ಪಸಂಖ್ಯಾತ ಇಲಾಖೆಯ ಸಚಿವರುಗಳು, ಹಿರಿಯ ಅಧಿಕಾರಿಗಳು, ವಿದೇಶಾಂಗ ವ್ಯವಹಾರ, ನಾಗರಿಕ ವಿಮಾನಯಾನ, ಏರ್ ಇಂಡಿಯಾ ಮತ್ತು ಭಾರತೀಯ ಹಜ್ ಸಮಿತಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಸಭೆಯಲ್ಲಿ, ಸಬ್ಸಿಡಿ ನೀಡುವುದನ್ನು ಮುಂದಿನ ವರ್ಷ ತೆಗೆದುಹಾಕಲು ನಿರ್ಧರಿಸಲಾಯಿತು ಎಂದು ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ದೃಢಪಡಿಸಿದ್ದಾರೆ.
2012ರಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕೆ ಮುನ್ನ ಹಜ್ ಯಾತ್ರಿಕರಿಗೆ ಸಬ್ಸಿಡಿ ನೀಡಲು ಪ್ರತಿವರ್ಷ ಸುಮಾರು 650 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗುತ್ತಿತ್ತು. ಆ ನಂತರ ಸಬ್ಸಿಡಿ ಮೊತ್ತ ನಿಧಾನವಾಗಿ ಕಡಿಮೆಯಾಗಿ ವರ್ಷಕ್ಕೆ ಸುಮಾರು 450 ಕೋಟಿ ರೂಪಾಯಿ ಮೀಸಲಿಡಲಾಗುತ್ತಿತ್ತು.
ಭಾರತೀಯ ಹಜ್ ಸಮಿತಿ ನೀಡಿರುವ ಕೆಲವು ಸಲಹೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಆದರೆ ಮುಂದಿನ ವರ್ಷದಿಂದಲೇ ಸಬ್ಸಿಡಿ ನಿಲ್ಲಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com