ನವದೆಹಲಿ: ಎಲ್ಲಾ ರೀತಿಯ ಬೇಳೆಕಾಳುಗಳ (ದ್ವಿದಳ ಧಾನ್ಯ) ರಫ್ತು ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ವಾಪಸ್ ಪಡೆದು ಕೇಂದ್ರ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರೈತರು ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ಪಡೆಯಲಿ ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಬೇಳೆ ಕಾಳುಗಳ ರಫ್ತಿನ ಮೇಲೆ ಇದ್ದ ನಿರ್ಬಂಧವನ್ನು ತೆರವು ಮಾಡಿದ್ದೇವೆ. ಪರಿಣಾಮ ರಫ್ತಿಗೆ ಮುಕ್ತ ಅವಕಾಶವಿದೆ. ಹೀಗಾಗಿ ರೈತರು ತಮ್ಮ ಬೆಳೆಗಳಿಗೆ ಉತ್ತಮ ಆದಾಯ ಪಡೆಯಬಹುದು ಮತ್ತು ಬಿತ್ತನೆ ಪ್ರದೇಶವನ್ನೂ ವಿಸ್ತರಿಸಿಕೊಳ್ಳಬಹುದಾಗಿದೆ,' ಎಂದಿದ್ದಾರೆ.
ಬೇಳೆಕಾಳುಗಳ ರಫ್ತಿಗೆ ಅನುಮತಿ ನೀಡುವುದರಿಂದ ಹೆಚ್ಚುವರಿ ಉತ್ಪನ್ನಗಳಿಗೆ ಪರ್ಯಾಯ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಅಲ್ಲದೆ, ದೇಶದ ರಫ್ತುದಾರರು ಮತ್ತೆ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಲೂ ನೆರವಾಗುತ್ತದೆ ಎಂದಿದ್ದಾರೆ.