ದೇಶ
ಜೈಪುರದ ಕೋಟೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಪದ್ಮಾವತಿ ಚಿತ್ರ ವಿರೋಧಿಸಿ ಬೆದರಿಕೆ ಪತ್ರ!
ಪದ್ಮಾವತಿ ಚಿತ್ರದ ವಿರುದ್ಧ ರಜಪೂತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದೆ. ಚಿತ್ರವನ್ನು ವಿರೋಧಿಸಿ ಬೆದರಿಕೆ ಪತ್ರ ಹೊಂದಿರುವ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಜೈಪುರದ ನಹಾರ್ಗಡ್...
ಜೈಪುರ: ಪದ್ಮಾವತಿ ಚಿತ್ರದ ವಿರುದ್ಧ ರಜಪೂತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದೆ. ಜೈಪುರದ ನಹಾರ್ಗಡ್ ಕೋಟೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಶವದ ಬಳಿ ಚಿತ್ರವನ್ನು ವಿರೋಧಿಸಿ ಬೆದರಿಕೆ ಪತ್ರ ಸಿಕ್ಕಿದೆ.
ಕೋಟೆಯ ಕಲ್ಲಿನ ಮೇಲೂ ಸಹ ಚಿತ್ರವನ್ನು ವಿರೋಧಿಸಿ ಬರೆಯಲಾಗಿದ್ದು, ನಾವು ಕೇವಲ ಪ್ರತಿಕೃತಿಗಳನ್ನಷ್ಟೇ ದಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಲಾಗಿದೆ. ಪದ್ಮಾವತಿ ಚಿತ್ರಕ್ಕೆ ವಿರೋಧ, ನಾವು ಕೇವಲ ಪ್ರತಿಕೃತಿಗಳನ್ನಷ್ಟೇ ದಹಿಸುವುದಿಲ್ಲ, ನಾವು ಸಾಯಿಸುತ್ತೇವೆ ಎಂಬ ಸಂದೇಶ ನೇಣು ಬಿದಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಶವದ ಬಳಿ ಸಿಕ್ಕಿದೆ. ಎನ್ಎನ್ಐ ವರದಿಯ ಪ್ರಕಾರ ಮೃತ ವ್ಯಕ್ತಿಯನ್ನು ಚೇತನ್ ಸೈನಿ (40) ಎಂದು ಗುರುತಿಸಲಾಗಿದೆ.
ಪದ್ಮಾವತಿ ಹೆಸರಿನಿಂದ ಎಚ್ಚರಿಕೆ ಪತ್ರ, ಬರಹ ಕೊನೆಯಾಗಿರುವುದು ಪದ್ಮಾವತಿ ಚಿತ್ರಕ್ಕೆ ಮತ್ತಷ್ಟು ಸಂಕಷ್ಟ ಉಂಟು ಮಾಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ ಪ್ರಾರಂಭದಿಂದಲೂ ಸಂಜಯ್ ಲೀಲಾ ಬನ್ಸಾಲಿಯ ಪದ್ಮಾವತಿ ಚಿತ್ರವನ್ನು ವಿರೋಧಿಸುತ್ತಿರುವ ರಜಪೂತ್ ಕರಣಿ ಸೇನಾ ಈ ಘಟನೆಯಲ್ಲಿ ಸಂಘಟನೆಯ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇದು ನಮ್ಮ ಪ್ರತಿಭಟನೆಯ ರೀತಿಯಲ್ಲ, ಈ ರೀತಿಯ ಪ್ರತಿಭಟನೆಗಳನ್ನು ಮಾಡಬೇಡಿ ಎಂದು ಕರಣಿ ಸೇನಾದ ಸದಸ್ಯ ಮಹಿಪಾಲ್ ಸಿಂಗ್ ಮಕ್ರಾನ ಜನತೆಗೆ ಕರೆ ನೀಡಿದ್ದಾರೆ.
ಘಟನೆ ಬಗ್ಗೆ ತನಿಖೆ ಪ್ರಗತಿಯಲ್ಲಿದೆ, ಈಗಲೇ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಜೈಪುರ ಉತ್ತರ ವಿಭಾಗದ ಡಿಸಿಪಿ ಸತ್ಯೇಂದ್ರ ಸಿಂಗ್ ಹೇಳಿದ್ದಾರೆ.