ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಗುರುವಾರ ವಾಣಿಜ್ಯ ನಗರಿ ಮುಂಬೈಗೆ ಉತ್ತರ ಭಾರತೀಯರ ಮತ್ತು ಇತರೆ ರಾಜ್ಯಗಳ ಜನತೆಯ ಕೊಡುಗೆಯನ್ನು ಶ್ಲಾಘಿಸುವ ಮೂಲಕ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ(ಎಂಎನ್ಎಸ್) ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ದೇಶದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮುಂಬೈ ಲಕ್ಷಾಂತರ ಜನಕ್ಕೆ ಆಶ್ರಯ ನೀಡಿದೆ ಮತ್ತು ಅವರಿಂದ ನಗರದ ಪ್ರತಿಷ್ಠೆ ಹೆಚ್ಚಾಗಿದೆ ಎಂದು ಮಹಾ ಸಿಎಂ ಹೇಳಿದ್ದಾರೆ.
ವಿವಿಧ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿರುವ ಹಲವು ಜನರಿಂದ ಹಾಗೂ ಮರಾಠಿಗರಿಂದ ಮುಂಬೈ ಒಂದು ಶ್ರೇಷ್ಟ ನಗರವಾಗಿದೆ ಎಂದು ನಾನು ಭಾವಿಸಿದ್ದೇವೆ. ಮುಂಬೈ ಗ್ರೇಟ್ ಆಗಲು ಉತ್ತರ ಭಾರತೀಯರ ಕೊಡುಗೆಯೂ ಇದೆ ಎಂದು ಫಡ್ನವಿಸ್ ಅವರು ನಿನ್ನೆ ಗೋಟ್ಕೊಪರ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.
ಮುಂಬೈನಲ್ಲಿ ನೆಲೆಸಿರುವ ಉತ್ತರ ಭಾರತೀಯ ಸಮುದಾಯ ಯಾವತ್ತೂ ನಗರದ ಪ್ರತಿಷ್ಠೆಯನ್ನು ಹೆಚ್ಚಿಸುವುದಕ್ಕಾಗಿ ದುಡಿಯುತ್ತಿದ್ದಾರೆ ಎಂದು ಬಿಜೆಪಿ ನಾಯಕ ತಿಳಿಸಿದ್ದಾರೆ.
ಮಹಾ ಸಿಎಂ ಹೇಳಿಕೆಯನ್ನು ಖಂಡಿಸಿದ ಎಂಎನ್ಎಸ್ ನಾಯಕ ನಿತಿನ್ ಸರ್ದೇಸಾಯಿ ಅವರು, ಫಡ್ವವಿಸ್ ಅವರಿಗೆ ಉತ್ತರ ಭಾರತೀಯರ ಮತವೇ ಮುಖ್ಯವಾಗಿದೆ. ಅವರಿಗೆ ಮೂಲ ಮುಂಬೈ ಜನತೆ ಬಗ್ಗೆ, ರೈತರ ಬಗ್ಗೆ ಮತ್ತು ಮಹಾರಾಷ್ಟ್ರ ಜನತೆ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಟೀಕಿಸಿದ್ದಾರೆ.