ಚಂಡೀಗಢ: ಆಗಸ್ಟ್ 25ರಂದು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದ ಬಳಿಕ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಡೇರಾದ 45 ಸದಸ್ಯರಿಗೆ ಶುಕ್ರವಾರ ಸಮನ್ಸ್ ಜಾರಿ ಮಾಡಿದ್ದಾರೆ.
ಡೇರಾ ಸಚ್ಚಾ ಸೌದ ಆಶ್ರಮದ ಸಮಿತಿ ಅಧ್ಯಕ್ಷ ವಿಪಾಸನ ಮತ್ತು ಉಪಾಧ್ಯಕ್ಷ ಪಿ.ಆರ್.ನೈನ್ ಹಾಗೂ 45 ಸದಸ್ಯರನ್ನು ಪಂಚಕುಲ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದ್ದು,
ಎಲ್ಲಾ ಆರೋಪಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ಇಂದು ಹರಿಯಾಣ ಪೊಲೀಸರು ಸಮನ್ಸ್ ನೀಡಿದ್ದಾರೆ.
ಈ ಮಧ್ಯೆ, ಡೇರಾದ 700 ಕೋಟಿ ರುಪಾಯಿ ವರ್ಗಾವಣೆ ಮತ್ತು ಹವಾಲ ಡೀಲ್ ಗೆ ಸಂಬಂಧಿಸಿದ ಮಾಹಿತಿ ಇರುವ ಹಾರ್ಡ್ ಡಿಸ್ಕ್ ಅನ್ನು ಪೊಲೀಸರು ಜಪ್ತಿ ಮಾಡಿದ್ದು, ಅದನ್ನು ತಪಾಸಣೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಗಸ್ಟ್ 25ರಂದು ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಂ ಸಿಂಗ್ ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದ ಬಳಿಕ ಪಂಚಕುಲದಲ್ಲಿ ನಡೆದ ಭಾರಿ ಹಿಂಸಾಚಾರದಲ್ಲಿ 38 ಮಂದಿ ಮೃತಪಟ್ಟಿದ್ದರು ಮತ್ತು 264 ಮಂದಿ ಗಾಯಗೊಂಡಿದ್ದರು.