ನವದೆಹಲಿ: ಹಿರಿಯ ಓರ್ವ ಪೊಲೀಸ್ ಅಧಿಕಾರಿಯನ್ನು ಪ್ರತಿ ಜಿಲ್ಲೆಯ ನೋಡೆಲ್ ಅಧಿಕಾರಿಯಾಗಿ ನೇಮಕಗೊಳಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠವು ಪ್ರತಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ನಿರ್ದೇಶನ ನೀಡುವಂತೆ ಆದೇಶಿಸಿತು. ಗೋ ರಕ್ಷಣೆ ಸಂಬಂಧಿ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಂದ ಕ್ರಮಗಳನ್ನು ವಿವರವಾಗಿ ವರದಿ ಮಾಡುವಂತೆ ಪೀಠ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಅಮಿತಾವ ರಾಯ್ ಮತ್ತು ಎ ಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ಪೀಠವು ಕೇಂದ್ರ ಸರ್ಕಾರ ಸಂವಿಧಾನದ 256 ನೇ ವಿಧಿಯಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ದೇಶನ ನೀಡಬೇಕೆಂದು ಹೇಳಿದೆ.
ಮಹಾತ್ಮ ಗಾಂಧಿಯವರ ಮೊಮ್ಮಗನಾದ ತುಶಾರ್ ಗಾಂಧಿಯವರು ಸಲ್ಲಿಸಿದ ಪಿಎಲ್ಐ ವಿಚಾರಣೆ ನಡೆಸಿದ ನ್ಯಾಯಾಲಯ ಗೋ ರಕ್ಷಣೆ ಹೆಸರಲ್ಲಿ ನಡೆಯುವ ಹಿಂಸಾಚಾರ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ಎಲ್ಲ ಸರ್ಕಾರಗಳಿಗೆ ನಿರ್ದೇಶನ ನೀಡಿ ಆದೇಶ ಮಾಡಿದೆ.
ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ಅವರು ತುಷಾರ್ ಗಾಂಧಿಯವರ ಪರ ವಾದ ಮಂಡಿಸಿದ್ದು ಗೋಮಾಂಸ ಸಾಗಣೆ ವಿಚಾರದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಹಿಂಸೆಯ ಕುರಿತು ಕಳವಳ ವ್ಯಕ್ತಪಡಿಸಿದರು.
ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರ ಈ ಹಿಂದಿನ ಹೇಳಿಕೆಯನ್ನು ಸಹ ಉಲ್ಲೇಖಿಸಿದ ಅವರು, ಕೇಂದ್ರ ಸರ್ಕಾರ ಕಾನೂನು ಕೈಗೆತ್ತಿಕೊಳ್ಳುವವರ ಪರ ವಹಿಸಬಾರದು ಎಂದರು.
ಗಾಂಧಿಯವರಲ್ಲದೆ, ಕಾಂಗ್ರೆಸ್ ನಾಯಕ ತಹಸೀನ್ ಪೂನವಾಲಾ ಸಹ ಈ ವಿಚಾರವಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.