ಗುರುಗ್ರಾಮ: ಗುರುಗ್ರಾಮದ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿಯ ಕೊಲೆಯಾದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಲಾಗಿರಲಿಲ್ಲ ಎಂದು ಮರಣೋತ್ತರ ವರದಿ ಸ್ಪಷ್ಟಪಡಿಸಿದೆ.
ಮೃತ ದೇಹದ ಮೇಲೆ ಗಾಯದ ಗುರುತು ಇರಲಿಲ್ಲ. ದೇಹದ ಮಾದರಿಗಳನ್ನು ಫಾರೆನ್ಸಿಕ್ ಅನಾಲಿಸಿಸ್ ಗೆ ಕಳಿಸಲಾಗಿತ್ತು, ಹತ್ಯೆಯಾದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಲಾಗಿರಲಿಲ್ಲ ಎಂದು ಫಾರೆನ್ಸಿಕ್ ತಜ್ಞ ದೀಪಕ್ ಮಾಥುರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ 8ರಂದು 7 ವರ್ಷ ವಿದ್ಯಾರ್ಥಿ ಪ್ರದ್ಯುಮನ್ ನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು, ವಿದ್ಯಾರ್ಥಿಯ ಶವ ಶಾಲಾ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಮತ್ತೋರ್ವ ವಿದ್ಯಾರ್ಥಿಯ ತಂದೆ ಸುಭಾಷ್ ಗರ್ಗ್ ಪ್ರದ್ಯುಮನ್ ದೇಹ ಪತ್ತೆಯಾದಾಗ ತಾವು ಕ್ಯಾಂಪಸ್ ನಲ್ಲೇ ಇದ್ದಿದ್ದಾಗಿ ತಿಳಿಸಿದ್ದರು.
ಶೌಚಾಲಯದಲ್ಲಿ ಹಾಗೂ ಹತ್ತಿರದ ಕಾರಿಡಾರ್ ನಲಿ ರಕ್ತದ ಕಲೆ ಇತ್ತು. ಅಷ್ಟೇ ಅಲ್ಲದೇ ಗೋಡೆಯ ಮೇಲೆ ರಕ್ತದ ಕಲೆಗಳಿದ್ದವು ಎಂದು ಗರ್ಗ್ ಹೇಳಿದ್ದರು. ಪೊಲೀಸರು ಆಗಮಿಸುವವರೆಗೆ ರಕ್ತದ ಕೆಲೆಗಳನ್ನು ಮುಟ್ಟದಂತೆ ಶಾಲಾ ಸಿಬ್ಬಂದಿಗಳಿಗೆ ತಿಳಿಸಿದ್ದರೂ ಸಹ ಪೊಲೀಸರು ಬರುವ ಮುನ್ನವೇ ರಕ್ತದ ಕಲೆಗಳನ್ನು ತೊಳೆದು ಸ್ವಚ್ಛಗೊಳಿಸಿದ್ದರು ಎಂದು ಗರ್ಗ್ ಹೇಳಿದ್ದರು. ತಮ್ಮ ಮಗನ ಹತ್ಯೆ ಪ್ರಕರಣದಲ್ಲಿ ಸಾಕ್ಷಿಳನ್ನು ತಿರುಚಲಾಗಿದೆ ಎಂದು ವರುಣ್ ಠಾಕೂರ್ ಆರೋಪಿಸಿದ್ದಾರೆ.