ಚೆನ್ನೈ: ನಿನ್ನೆ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಿ.ಕೆ.ಶಶಿಕಲಾ ಅವರನ್ನು ವಜಾಗೊಳಿಸಿದ ಬೆನ್ನಲ್ಲೆ ಇಂದು ಅವರ ಅಳಿಯ ಟಿಟಿವಿ ದಿನಕರನ್, ಕೇಂದ್ರ ಕಾರ್ಯದರ್ಶಿ ಹುದ್ದೆಯಿಂದ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ವಜಾಗೊಳಿಸಿ ಪಿ.ಪಳನಿಯಪ್ಪಂ ಅವರನ್ನು ನೇಮಿಸಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿರುವ ಮಧ್ಯಂತರ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಅವರು ನೇಮಿಸಿದ ಎಲ್ಲಾ ಹುದ್ದೆಗಳು ಅಮಾನ್ಯವಾದದ್ದು ಎಂದು ಸಂಯುಕ್ತ ಎಐಎಡಿಎಂಕೆಯ ಇತರ ನಾಯಕರು ಘೋಷಿಸಿದ್ದರು. ಸಾಮಾನ್ಯ ಮಂಡಳಿ ಸಭೆಯಲ್ಲಿ ಪ್ರಬಲ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ತೆಗೆದುಹಾಕುವ ಕುರಿತು ಕೂಡ ನಿರ್ಣಯ ಕೈಗೊಳ್ಳಲಾಗಿತ್ತು.
ಫೆಬ್ರವರಿ 15ರಂದು ನ್ಯಾಯಾಲಯಕ್ಕೆ ಶರಣಾಗುವವರೆಗೆ ಶಶಿಕಲಾ ಅವರು ನೇಮಿಸಿದ ಎಲ್ಲಾ ಹುದ್ದೆಗಳು ಮತ್ತು ವಜಾಗೊಳಿಸಿದ ನಿಯಮಗಳೆಲ್ಲವೂ ಅನೂರ್ಜಿತ ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ಸಾಮಾನ್ಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದರಿಂದ ಟಿಟಿವಿ ದಿನಕರನ್ ನೇಮಿಸಿರುವ ಹುದ್ದೆಗಳಿಗೆ ಕೂಡ ಮಾನ್ಯತೆಯಿರುವುದಿಲ್ಲ.