ಚಂಡೀಗಢ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾದ ನಂತರ ಅತ್ಯಾಚಾರಿ ಬಾಬಾನ ಆಶ್ರಮಕ್ಕೆ ಘೋಷಿಸಲಾಗಿದ್ದ 51 ಲಕ್ಷ ರುಪಾಯಿ ಅನುದಾನವನ್ನು ಹರಿಯಾಣ ಸರ್ಕಾರ ಶುಕ್ರವಾರ ಹಿಂಪಡೆದಿದೆ.
ಆಗಸ್ಟ್ 15ರಂದು ಡೇರಾ ಸಚ್ಚಾ ಸೌದಾದ ಸಿರ್ಸಾ ಆಶ್ರಮಕ್ಕೆ ಘೋಷಿಸಲಾಗಿದ್ದ 51 ಲಕ್ಷ ರುಪಾಯಿ ಅನುದಾನವನ್ನು ವಾಪಸ್ ಪಡೆದಿರುವುದಾಗಿ ಹರಿಯಾಣ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ಅವರು ಇಂದು ವರದಿಗಾರರಿಗೆ ತಿಳಿಸಿದ್ದಾರೆ.
ಆಗಸ್ಟ್ 15ರಂದು ಸಿರ್ಸಾ ಆಶ್ರಮಕ್ಕೆ ಭೇಟಿ ನೀಡಿದ್ದ ಸಚಿವ ಶರ್ಮಾ ಅವರು, ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡೇರಾ ಸಚ್ಚಾ ಸೌದಾಗೆ 51 ಲಕ್ಷ ರುಪಾಯಿ ಅನುದಾನ ಘೋಷಿಸಿದ್ದರು. ಅಲ್ಲದೆ 60 ವರ್ಷದ ಸಚಿವರು 50 ವರ್ಷದ ಸ್ವಯಂ ಘೋಷಿತ ದೇವಮಾನವನ ಕಾಲಿಗೆ ಬಿದ್ದು ನಮಸ್ಕರಿಸಿದ್ದರು.
ಆಶ್ರಮದಲ್ಲಿ ಇಬ್ಬರು ಸಾದ್ವಿಯರ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಬಾಬಾನಿಗೆ ಪಂಚಕುಲ ಸಿಬಿಐ ವಿಶೇಷ ಕೋರ್ಟ್ ಆಗಸ್ಟ್ 25ರಂದು 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.