ನವದೆಹಲಿ: ಕೆಲ ದೇಶ ವಿರೋಧಿ ವ್ಯಕ್ತಿಗಳು ಸಾಮಾಜಿಕ ತಾಣದಲ್ಲಿ ಪರಿಶೀಲಸಿದ ಮಾಹಿತಿಯನ್ನು ಪೋಸ್ಟ್ ಮಾಡುವ ಮೂಲಕ ಸಮಾಜದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಲು ಯತ್ನಿಸುತ್ತಿದ್ದು, ಅದನ್ನು ನೀವು ನಂಬಬೇಡಿ ಮತ್ತು ಪರಿಶೀಲಿಸದೆ ಫಾರ್ವಡ್ ಮಾಡಬೇಡಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜನತೆಗೆ ಸೋಮವಾರ ಕರೆ ನೀಡಿದ್ದಾರೆ.
ವಾಟ್ಸ್ ಆಪ್ ನಂತಹ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡುತ್ತಿರುವ ಹಲವು ಸುದ್ದಿ ಮತ್ತು ಮಾಹಿತಿ ಸಂಪೂರ್ಣ ತಪ್ಪಾಗಿರುತ್ತದೆ ಅಥವಾ ಆಧಾರ ರಹಿತವಾಗಿರುತ್ತದೆ. ಆದರೂ ಇದನ್ನು ಪರಿಶೀಲಿಸದೆ ನಿತ್ಯ ಸರ್ಕೂಲೇಟ್ ಮಾಡಲಾಗುತ್ತಿದೆ ಎಂದು ಗೃಹ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು ಗುಪ್ತಚರ ಇಲಾಖೆಯ ಶಶಸ್ತ್ರ ಸೀಮಾ ಬಲ(ಎಸ್ಎಸ್ ಬಿ) ಘಟಕವನ್ನು ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಪರಿಶೀಲಿಸದೆ ಯಾವುದೇ ವಾಟ್ಸ್ ಆಪ್ ಸಂದೇಶವನ್ನು ನಂಬಬೇಡಿ ಮತ್ತು ಫಾರ್ವಡ್ ಮಾಡಬೇಡಿ ಎಂದು ನಾನು ಎಸ್ಎಸ್ ಬಿ ಯೋಧರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.
1,751 ಕಿ.ಮೀ. ಭಾರತ-ನೇಪಾಳ್ ಹಾಗೂ 699 ಕಿ.ಮೀ ಉದ್ದದ ಭಾರತ-ಭೂತಾನ್ ಗಡಿ ರಕ್ಷಣೆಯಲ್ಲಿ ಎಸ್ಎಸ್ ಬಿ ಯೋಧರು ಮಹತ್ವ ಪಾತ್ರ ವಹಿಸುತ್ತಿದ್ದಾರೆ ಎಂದ ರಾಜನಾಥ್ ಸಿಂಗ್, ಅಂತಹ ತೆರೆದ ಗಡಿಗಳನ್ನು ಕಾಯುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ.