ನೇಪಾಳದಲ್ಲಿ ಕಾಣಿಸಿಕೊಂಡ ರಾಮ್ ರಹೀಮ್ ದತ್ತು ಪುತ್ರಿ ಹನಿಪ್ರೀತ್, ಮತ್ತೆ ಎಸ್ಕೇಪ್?

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿ ಪ್ರೀತ್ ನೇಪಾಳದಲ್ಲಿ ತಲೆಮರಿಸಿಕೊಂಡಿರುವುದು ಖಚಿತವಾಗಿದೆ...
ಗುರ್ಮೀತ್ ರಾಮ್ ರಹೀಮ್-ಹನಿಪ್ರೀತ್
ಗುರ್ಮೀತ್ ರಾಮ್ ರಹೀಮ್-ಹನಿಪ್ರೀತ್
ನವದೆಹಲಿ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿ ಪ್ರೀತ್ ನೇಪಾಳದಲ್ಲಿ ತಲೆಮರಿಸಿಕೊಂಡಿರುವುದು ಖಚಿತವಾಗಿದೆ. 
ಅತ್ಯಾಚಾರ ಪ್ರಕರಣದಲ್ಲಿ ಗುರ್ಮಿತ್ ರಾಮ್ ರಹೀಮ್ ಸಿಂಗ್ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ ನಂತರ ತಲೆಮರೆಸಿಕೊಂಡಿರುವ ಹನಿ ಪ್ರೀತ್ ಕಳೆದ ಒಂದು ವಾರದಿಂದ ಭಾರತದ ಗಡಿಯಿಂದ ಕೇವಲ 5 ಕಿಮೀ ದೂರದ ನೇಪಾಳದ ಮಹೇಂದ್ರ ನಗರದಲ್ಲಿ ಅಡಗಿಕೊಂಡಿದ್ದಾಳೆ ಎಂಬ ಮಾಹಿತಿ ಹರಿಯಾಣ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. 
ಹನಿಪ್ರೀತ್ ನೇಪಾಳ ನೋಂದಣಿಯ ಕಾರಿನಲ್ಲಿ ಇತರ ಮೂವರೊಂದಿಗೆ ಮಹೇಂದ್ರ ನಗರದಲ್ಲಿ ಕಾಣಿಸಿಕೊಂಡಿದ್ದಳು. ಇನ್ನು ಪೊಲೀಸರಿಂದ ತಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಮಹೇಂದ್ರ ನಗರದಿಂದಲೂ ಹಿನಿಪ್ರೀತ್ ಎಸ್ಕೇಪ್ ಆಗಿದ್ದಾಳೆ ಎಂದು ಹೇಳಲಾಗುತ್ತಿದೆ. ಶನಿವಾರ ಡೇರಾದ ಸಹಾಯಕ ಪ್ರದೀಪ ಗೋಯೆಲ್ ಅಲಿಯಾಸ್ ವಿಕ್ಕಿಯನ್ನು ರಾಜಸ್ಥಾನ ಉದಮ್ ಪುರ್ ನಲ್ಲಿ ಬಂಧಿಸಿದ್ದರು. ವಿಕ್ಕಿ ಪೊಲೀಸರಿಗೆ ಹನಿಪ್ರೀತ್ ನೇಪಾಳದಲ್ಲಿ ಅಡಗಿದ್ದಾಳೆ ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದ.
ಅತ್ಯಾಚಾರ ಪ್ರಕರಣದಲ್ಲಿ ಗುರ್ಮಿತ್ ರಾಮ್ ರಹೀಮ್ ದೋಷಿ ಎಂದು ಸಾಬೀತಾದ ಬಳಿಕ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಈ ವೇಳೆ ಗುರ್ಮಿತ್ ಬೆಂಬಲಿಗರು ಪಂಚಕುಲದಲ್ಲಿ ಹಿಂಸಾಚಾರ ನಡೆಸಿದ್ದರು. ಪರಿಣಾಮ 41 ಮಂದಿ ಸಾವನ್ನಪ್ಪಿ, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 
ಗುರ್ಮಿತ್ ಬಂಧನದ ವೇಳೆ ಆತನನ್ನು ಅಪಹರಣ ಮಾಡಲು ಡೇರಾ ಗೂಂಡಾಗಳು ಯೋಜನೆ ರೂಪಿಸಿದ್ದರು. ಈ ಯೋಜನೆಯಲ್ಲಿ ಹನಿಪ್ರೀತ್ ಕೈವಾಡ ಕೂಡ ಇತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಆಕೆಯ ಮೇಲೆ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 1 ರಂದು ಹನಿಪ್ರೀತ್ ವಿರುದ್ಧ ಹರಿಯಾಣ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಇದಾದ ಬಳಿಕ ಹನಿಪ್ರೀತ್ ತಲೆಮರೆಸಿಕೊಂಡಿದ್ದಾಳೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com