ಜಯಲಲಿತಾ ಆರೋಗ್ಯದ ಬಗ್ಗೆ ನಾವೆಲ್ಲ ಸುಳ್ಳು ಹೇಳಿದ್ದೆವು: ತಮಿಳುನಾಡು ಅರಣ್ಯ ಸಚಿವ ಶ್ರೀನಿವಾಸನ್

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿದ್ದಾಗ ಅವರ ಆರೋಗ್ಯದ ಬಗ್ಗೆ ಜನತೆಗೆ ನಾವೆಲ್ಲಾ ....
ತಮಿಳು ನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ
ತಮಿಳು ನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿದ್ದಾಗ ಅವರ ಆರೋಗ್ಯದ ಬಗ್ಗೆ ಜನತೆಗೆ ನಾವೆಲ್ಲಾ ಜನತೆ ಮುಂದೆ ಸುಳ್ಳು ಹೇಳುತ್ತಿದ್ದೆವು. ಇದಕ್ಕೆ ಜನರ ಬಳಿ ಕ್ಷಮೆ ಕೇಳುವುದಾಗಿ ರಾಜ್ಯದ ಅರಣ್ಯ ಖಾತೆ ಸಚಿವ ಸಿ.ಶ್ರೀನಿವಾಸನ್ ಹೇಳಿದ್ದಾರೆ. 
ಚೆನ್ನೈಯಿಂದ 500 ಕಿಲೋ ಮೀಟರ್ ದೂರದ ಮಧುರೈಯಲ್ಲಿ ಅವರು ಕಳೆದ ರಾತ್ರಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಜಯಲಲಿತಾ ಅವರು ಇಡ್ಲಿ ತಿಂದರು, ಜನರು ಅವರನ್ನು ಭೇಟಿ ಮಾಡಿದರು ಎಂದೆಲ್ಲ ನಾವು ಸುಳ್ಳು ಹೇಳುತ್ತಿದ್ದೆವು. ಆದರೆ ವಾಸ್ತವ ಬೇರೆಯೇ ಆಗಿತ್ತು. ನಾವು ಯಾರೂ ಅವರನ್ನು ಭೇಟಿ ಮಾಡುತ್ತಿರಲಿಲ್ಲ. ಅಂದು ಸುಳ್ಳು ಹೇಳಿದ್ದಕ್ಕೆ ಈಗ ಜನರ ಬಳಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 22ರಂದು ಚೆನ್ನೈನ ಅಪೊಲೊ ಆಸ್ಪತ್ರೆಗೆ ತೀವ್ರ ಅಸೌಖ್ಯಕ್ಕೊಳಗಾಗಿ ಜಯಲಲಿತಾ ಅವರು ದಾಖಲಾದ ನಂತರ ಅವರನ್ನು ಹಲವರು ಭೇಟಿ ಮಾಡಿದ್ದರು, ಜಯಲಲಿತಾ ಅವರು ಮಾತನಾಡುತ್ತಿದ್ದಾರೆ ಎಂದೆಲ್ಲ ದಿನಕ್ಕೊಂದು ಸುಳ್ಳನ್ನು ಸರ್ಕಾರದಲ್ಲಿರುವವರು ಮತ್ತು ಆಡಳಿತಾರೂಢ ಎಐಎಡಿಎಂಕೆ ಪಕ್ಷದವರು ಹೇಳುತ್ತಿದ್ದೆವು.ಆದರೆ ಅವೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.
ಅಪೊಲೊ ಆಸ್ಪತ್ರೆಯ ಮುಖ್ಯಸ್ಥ ಪ್ರತಾಪ್ ರೆಡ್ಡಿಯವರ ಕೋಣೆಗೆ ಹೋಗಿ ಜಯಲಲಿತಾ ಅವರ ಆರೋಗ್ಯದ ಕುರಿತು ವಿಚಾರಿಸುತ್ತಿದ್ದೆವು. ಚರ್ಚಿಸುತ್ತಿದ್ದೆವು. ಆದರೆ ಹೊರಗೆ ಬಂದ ಮೇಲೆ ಮಾಧ್ಯಮಗಳ ಎದುರು ನಾವು ಹೇಳುತ್ತಿದ್ದ ವಿಷಯಗಳೇ ಬೇರೆ. ಪಕ್ಷದ ಗುಟ್ಟು ಹೊರಗೆ ಗೊತ್ತಾಗಬಾರದೆಂಬುದು ಉದ್ದೇಶವಾಗಿತ್ತು ಎಂದು ಶ್ರೀನಿವಾಸನ್ ಹೇಳಿದರು.
ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗ ಅವರನ್ನು ಯಾರೂ ಭೇಟಿ ಮಾಡಿರಲಿಲ್ಲ. ಅವರ ಸಹಚರೆ ವಿ.ಕೆ.ಶಶಿಕಲಾ ಮಾತ್ರ ಭೇಟಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 22ಕ್ಕೆ ಅಪೊಲೊ ಆಸ್ಪತ್ರೆಗೆ ದಾಖಲಾದ ಜಯಲಲಿತಾ ಅವರು ಡಿಸೆಂಬರ್ 5ರಂದು ನಿಧನರಾಗಿದ್ದರು. ಈ ಮಧ್ಯೆ ಸರ್ಕಾರದಿಂದ ಮತ್ತು ಆಸ್ಪತ್ರೆಯಿುಂದ ಜಯಲಲಿತಾ ಆರೋಗ್ಯದ ಬಗ್ಗೆ ಬಹಳ ಕಡಿಮೆ ವಿಷಯಗಳು ಹೊರಬೀಳುತ್ತಿದ್ದವು.ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯ ಸುಧಾರಿಸುತ್ತಿದೆ ಎಂದಷ್ಟೇ ಸುದ್ದಿಗಳು ಬರುತ್ತಿದ್ದವು. 
ಶ್ರೀನಿವಾಸನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಶಿಕಲಾ ಅಳಿಯ ಟಿಟಿವಿ ದಿನಕರನ್, 2016, ಅಕ್ಟೋಬರ್ 1 ರ ನಂತರ ಶಶಿಕಲಾರನ್ನು ಕೂಡ ಜಯಲಲಿತಾ ಕೋಣೆಗೆ ಬಿಡುತ್ತಿರಲಿಲ್ಲ. ಅಲ್ಲಿಯವರೆಗೆ ಶಶಿಕಲಾ ಜಯಲಲಿತಾ ಕೋಣೆಗೆ ಕೇವಲ 2 ನಿಮಿಷಗಳಿಗೆ ಹೋಗಿ ಬರುತ್ತಿದ್ದರು ಎಂದು ಹೇಳಿದ್ದಾರೆ.
ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸಲು ತಮಿಳು ನಾಡು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತನಿಖಾ ಆಯೋಗವನ್ನು ಸ್ಥಾಪಿಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.
ಜಯಲಲಿತಾ ಸಾವಿನ ಬಗ್ಗೆ ಅನೇಕ ಅನುಮಾನಗಳು ಕೇಳಿಬರುತ್ತಲೇ ಇವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com