ಮೌ: ಗುತ್ತಿಗೆದಾರ ಮನ್ನಾ ಸಿಂಗ್ ಕೊಲೆ ಪ್ರಕರಣದಲ್ಲಿ ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ಶಾಸಕ ಮುಖ್ತಾರ್ ಅನ್ಸಾರಿ ಹಾಗೂ ಇತರೆ ಏಳು ಆರೋಪಿಗಳನ್ನು ಬುಧವಾರ ಮೌ ಕೋರ್ಟ್ ಖುಲಾಸೆಗೊಳಿಸಿದೆ. ಆದರೆ ಪ್ರಕರಣದ ಇತರೆ ಮೂವರು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.
ಕಳೆದ ಜನವರಿಯಲ್ಲಿ ಗ್ಯಾಂಗ್ ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಮತ್ತು ಆತನ ಸಹೋದರನ ರಾಜಕೀಯ ಪ್ರವೇಶ ವಿರೋಧಿಸಿ ಬಿಜೆಪಿ ಬಿಎಸ್ಪಿಗೆ ಲೀಗಲ್ ನೋಟಿಸ್ ನೀಡಿತ್ತು.
2009ರಲ್ಲಿ ಸ್ಥಳೀಯ ಗುತ್ತಿಗೆದಾರ ಮನ್ನಾ ಸಿಂಗ್ ಅವರನ್ನು ಅನ್ಸಾರಿ ಗ್ಯಾಂಗ್ ಕೊಲೆ ಮಾಡಿದೆ ಎಂದು ಆರೋಪಿಸಿದ್ದ ಬಿಜೆಪಿ ನಾಯಕ ಅಶೋಕ್ ಸಿಂಗ್ ಅವರು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಲೀಗಲ್ ನೋಟಿಸ್ ನೀಡಿದ್ದರು.
ಮುಖ್ತಾರ್ ಅನ್ಸಾರಿ ಅವರು ಇತ್ತೀಚಿಗೆ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮೌನಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.