ಯುವಕನ ಮೇಲೆ ನಡೆದ ಹಲ್ಲೆ
ದೇಶ
ಗುಜರಾತ್: ದಲಿತ ಯುವಕ ಮೀಸೆ ಬೆಳೆಸಿದ್ದಕ್ಕೆ ಮೇಲ್ಜಾತಿಯವರಿಂದ ಹಲ್ಲೆ!
ದಲಿತ ಯುವಕನೊಬ್ಬ ಮೀಸೆ ಬೆಳೆಸಿದ್ದಕ್ಕಾಗಿ ಮೇಲ್ಜಾತಿಯ ಜನರು ಆತನ ಮೇಲೆ ಹಲ್ಲೆ ನಡೆಸಿದ .....
ಗಾಂಧಿನಗರ(ಗುಜರಾತ್): ದಲಿತ ಯುವಕನೊಬ್ಬ ಮೀಸೆ ಬೆಳೆಸಿದ್ದಕ್ಕಾಗಿ ಮೇಲ್ಜಾತಿಯ ಜನರು ಆತನ ಮೇಲೆ ಹಲ್ಲೆ ನಡೆಸಿದ ಘಟನೆ ಗುಜರಾತ್ ನ ಗಾಂಧಿನಗರದಲ್ಲಿ ನಡೆದಿದೆ.
ದರ್ಬಾರ್ ಸಮುದಾಯದ ಮೂವರು 24 ವರ್ಷದ ಪಿಯೂಷ್ ಪರ್ಮರ್ ಎಂಬಾತನ ಮೇಲೆ ಕಳೆದ 25ರಂದು ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದಲಿತ ಯುವಕ ಮೀಸೆ ಬೆಳೆಸಿದ್ದು ಮೇಲ್ಜಾತಿಯವರಿಗೆ ಸರಿ ಕಾಣದ ಕಾರಣ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರು ಹಿಂಸಾ ಕಾಯ್ದೆಯಡಿ ಹಲ್ಲೆ ನಡೆಸಿದ ಮೂವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಉಪ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ.
ಪರ್ಮರ್ ಖಾಸಗಿ ಕಂಪೆನಿಯೊಂದರಲ್ಲಿ ಗಾಂಧಿ ನಗರದಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಸಂಬಂಧಿ ದಿಗಂತ್ ಮಹೆರಿಯಾರೊಂದಿಗೆ ತಮ್ಮ ಗ್ರಾಮದಲ್ಲಿ ನವರಾತ್ರಿಯ ಗರ್ಭಾ ವೀಕ್ಷಿಸಿ ಮನೆಗೆ ಹಿಂತಿರುಗುತ್ತಿದ್ದರು. ಆಗ ಕೆಲವರು ಅವರ ಮೇಲೆ ಜಾತಿ ಕುರಿತು ನಿಂದಿಸಲು ಆರಂಭಿಸಿದರು.
ಕತ್ತಲಾಗಿದ್ದರಿಂದ ಯಾರು ಎಂದು ಕಾಣಿಸಲಿಲ್ಲ. ಧ್ವನಿ ಕೇಳಿದ ಜಾಗಕ್ಕೆ ಹೋದಾಗ ಮೂವರು ದರ್ಬಾರ್ ಸಮುದಾಯದವರಾಗಿದ್ದರು. ನಾವು ಮಾತನಾಡಲಿಲ್ಲ. ಆದರೆ ಅವರು ನಮ್ಮನ್ನು ಮನೆಯವರೆಗೆ ಹಿಂಬಾಲಿಸಿ ನಮ್ಮನ್ನು ಮತ್ತೆ ನಿಂದಿಸಲು ಆರಂಭಿಸಿದರು. ಮೊದಲು ನನ್ನ ಸೋದರ ದಿಗಂತ್ ಮೇಲೆ ಹಲ್ಲೆ ಮಾಡಿ ನಂತರ ನನ್ನನ್ನು ಹೊಡೆಯಲು ಆರಂಭಿಸಿದರು. ಕೆಳ ಜಾತಿಯಿಂದ ಬಂದವನಾಗಿದ್ದರೂ ಮೀಸೆ ಏಕೆ ಬೆಳೆಸುತ್ತಿ ಎಂದು ಹೇಳಿ ಒಂದೇ ಸಮನೆ ಹೊಡೆಯಲು ಆರಂಭಿಸಿದರು ಎಂದು ಪಿಯೂಷ್ ಪರ್ಮರ್ ಎಫ್ಐಆರ್ ನಲ್ಲಿ ದೂರು ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ