ಭೂಪಾಲ್ : ಮಧ್ಯಪ್ರದೇಶದ ಕೇರಿಯಾ ಹಳ್ಳಿಯಲ್ಲಿ ದುಷ್ಕರ್ಮಿಗಳು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ವಿಧ್ವಂಸಗೊಳಿಸಿದ್ದಾರೆ.ನಂತರ ಈ ಪ್ರತಿಮೆಯನ್ನು ಮತ್ತೊಂದೆಡೆಗೆ ಜಿಲ್ಲಾಡಳಿತದಿಂದ ಸ್ಥಳಾಂತರಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಸಾತ್ನಾ ಜನವಸತಿ ಪ್ರದೇಶದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸುವ ಮೂಲಕ ಹೀನಕೃತ್ಯವೆಸಗಿದ್ದಾರೆ.
ರಾಜಸ್ತಾನದ ಅಕ್ರೋಲ್ ನಲ್ಲಿ ನಿನ್ನೆ ದಿನ ಅಂಬೇಡ್ಕರ್ ಪ್ರತಿಮೆ ಶಿರಚ್ಚೇದನ ಮಾಡಲಾಗಿತ್ತು.
ಈ ವಾರದಲ್ಲಿ ರಾಜಸ್ತಾನದ ನಾಥ್ ದ್ವಾರದಲ್ಲಿ ಮಹಾತ್ಮಗಾಂಧಿ ಅವರ ಪ್ರತಿಮೆಯನ್ನು ಶಿರಚ್ಚೇದ ಮಾಡಲಾಗಿತ್ತು.
ಕಳೆದ ತಿಂಗಳು ಪಶ್ಚಿಮ ಬಂಗಾಳದಲ್ಲಿ ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಪ್ರತಿಮೆಯನ್ನು ಕೆಳಕ್ಕೆ ಉರುಳಿಸಲಾಗಿತ್ತು. ಅಸ್ಸಾಂನ ಕೋಕ್ರಾಝಾರ್ ನಲ್ಲಿ ಭಾರತೀಯ ಜನ ಸಂಘ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು.
ಈಶಾನ್ಯ ರಾಜ್ಯ ತ್ರಿಪುರಾದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಮ್ಯೂನಿಸ್ಟ್ ನಾಯಕ ಲೆನಿನ್ ಪ್ರತಿಮೆ ಧ್ವಂಸಗೊಳಿಸಿದ ನಂತರ ದೇಶದ ಇತರೆಡೆಯೂ ವಿವಿಧ ನಾಯಕರ ಪ್ರತಿಮೆ ಧ್ವಂಸಗೊಳಿಸುವಂತಹ ಹೀನ ಕೃತ್ಯಗಳು ನಡೆಯುತ್ತಿವೆ.
ತಮಿಳುನಾಡಿನ ಸಾಮಾಜಿಕ ಸುಧಾರಕ ಇ. ವಿ. ರಾಮಸ್ವಾಮಿ ಹಾಗೂ ಪೆರಿಯಾರ್ ಅವರ ಪ್ರತಿಮೆಗೂ ಹಾನಿ ಮಾಡಲಾಗಿತ್ತು.
Advertisement