ಕಥುವಾ ಬಾಲಕಿಯ ಕುಟುಂಬಕ್ಕೆ ಕಾನೂನು ನೆರವು ಖಾತರಿಪಡಿಸಿ: ಕಾಶ್ಮೀರ ವಕೀಲರ ಸಂಘಕ್ಕೆ ಸುಪ್ರೀಂ ಸೂಚನೆ

ಕಥುವಾ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸದಂತೆ ಮತ್ತು ಬಾಲಕಿಯ....
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಕಥುವಾ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸದಂತೆ ಮತ್ತು ಬಾಲಕಿಯ ಕುಟುಂಬಕ್ಕೆ ಕಾನೂನು ನೆರವು ನೀಡುವ ಬಗ್ಗೆ ಖಚಿತಪಡಿಸುವಂತೆ ಜಮ್ಮು ಮತ್ತು ಕಾಶ್ಮೀರ ವಕೀಲರ ಸಂಘಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಕಾಶ್ಮೀರ ವಕೀಲರ ಸಂಘ ಆರೋಪಿಯ ರಕ್ಷಣೆಗೆ ನಿಂತಿದ್ದು, ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಕೋರಿ ಕಾಶ್ಮೀರ ವಕೀಲರ ತಂಡವೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಆರೋಪದ ಬಗ್ಗೆ ಏಪ್ರಿಲ್ 19ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ರಾಜ್ಯ ಬಾರ್ ಕೌನ್ಸಿಲ್, ಜಮ್ಮು ಹೈಕೋರ್ಟ್ ಬಾರ್ ಕೌನ್ಸಿಲ್ ಮತ್ತು ಕಥುವಾ ಜಿಲ್ಲಾ ವಕೀಲರ ಸಂಘಕ್ಕೆ ನೋಟಿಸ್ ನೀಡಿದೆ.
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪಿಗಳ ಪರ ನಿಂತು, ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿರುವ ಸ್ಥಳೀಯ ವಕೀಲರ ಸಂಘದ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಇದಕ್ಕು ಮುನ್ನ ವಕೀಲರ ಸಂಘ ಆರೋಪಿಯ ರಕ್ಷಣೆಗೆ ನಿಂತಿರುವ ಬಗ್ಗೆ ಮತ್ತು ಪ್ರತಿಭಟನೆಗೆ ಕರೆ ನೀಡಿದ್ದ ಬಗ್ಗೆ ದಾಖಲೆ ನೀಡುವಂತೆ ವಕೀಲ ಪಿ ವಿ ದಿನೇಶ್ ಅವರಿಗೆ ಕೋರ್ಟ್ ಸೂಚಿಸಿತ್ತು. 
'ನೀವು ಕೆಲವು ದಾಖಲೆಗಳೊಂದಿಗೆ ಬನ್ನಿ, ನಿಮ್ಮ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಯಾವುದೇ ದಾಖಲೆ ಇಲ್ಲ. ನಿಮ್ಮ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಿ ಸಲ್ಲಿಸಿದರೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು' ಎಂದು ಕೋರ್ಟ್ ಸ್ಪಷ್ಟಪಡಿಸಿದೆ. 
ರಾಜ್ಯ ಪೊಲೀಸ್‌ ಅಪರಾಧ ವಿಭಾಗದವರು ಸರಿಯಾಗಿ ತನಿಖೆ ಮಾಡುವುದಿಲ್ಲ ಎಂದು ಆರೋಪಿಸಿದ್ದ ವಕೀಲರ ಸಂಘ, ಪ್ರಕರಣದಲ್ಲಿ ಆರೋಪಿ ವಿರುದ್ಧ ಚಾರ್ಜ್‌ಶೀಟ್‌ ದಾಖಲಿಸುವುದನ್ನು ತಡೆದಿದ್ದರು ಎಂದು ಸಂತ್ರಸ್ಥ ಪರ ವಕೀಲರು ಆರೋಪಿಸಿದ್ದರು. 
ಕಳೆದ ಜನವರಿ 10ರಂದು ಎಂಟು ವರ್ಷದ ಬಾಲೆಯೊಬ್ಬಳನ್ನು ಅಪಹರಿಸಿ, ಅತ್ಯಾಚಾರ ಎಸಗಿ, ದೈಹಿಕವಾಗಿ ಹಿಂಸಿಸಿ, ಕೊಂದುಹಾಕಿದ ಘಟನೆ ಕಥುವಾ ಜಿಲ್ಲೆಯಲ್ಲಿ ನಡೆದಿತ್ತು. ಸಂತ್ರಸ್ಥೆಯು ಮುಸ್ಲಿಂ ಬುಡಕಟ್ಟು ಸಮುದಾಯಕ್ಕೆ ಸೇರಿದವಳು. ಬಾಲಕಿ ಕಾಣೆಯಾದ ಒಂದು ವಾರದ ಬಳಿಕ ಜನವರಿ 17ರಂದು ಆಕೆಯ ಶವ ಪತ್ತೆಯಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, 8 ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಸಾಕ್ಷ್ಯನಾಶ ಸಂಬಂಧ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಹಾಗೂ  ಹೆಡ್ ಕಾನ್ಸ್ ಟೇಬಲ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಈ ಪ್ರಕರಣದ ಕುರಿತು ಚಾರ್ಜ್‌ಶೀಟ್‌ ದಾಖಲಿಸದಂತೆ ತಡೆದ ವಕೀಲರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಕಳೆದ ಸೋಮವಾರ ಎಫ್‌ಐಆರ್‌ ದಾಖಲಿಕೊಂಡಿದ್ದಾರೆ.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಜಮ್ಮುವಿನ ವಕೀಲರ ಸಂಘವು ಬುಧವಾರ ಬಂದ್‌ ಕೂಡ ಆಚರಿಸಿತ್ತು. ಅಲ್ಲದೇ, ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗದ ಪೊಲೀಸರ ವಿಶೇಷ ತಂಡದ ವಿಶ್ವಾಸಾರ್ಹತೆ ಮೇಲೂ ಅನುಮಾನ ವ್ಯಕ್ತಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com