ವಡೊದರ: ಕೇಂದ್ರ ಸಚಿವೆ ಮನೆಕಾ ಗಾಂಧಿ ಮತ್ತು ಇತರೆ ಬಿಜೆಪಿ ನಾಯಕರು ವಡೊದರಲ್ಲಿರುವ ಡಾ.ಬಿಆರ್ ಅಂಬೇಡ್ಕರ್ ಅವರ 127ನೇ ಜಯಂತಿ ಪ್ರಯುಕ್ತ ಸಂವಿಧಾನ ಶಿಲ್ಪಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ದಲಿತ ಸಮುದಾಯದ ಸದಸ್ಯರು ಪ್ರತಿಮೆ ಸ್ವಚ್ಛಗೊಳಿಸಿದ ಘಟನೆ ಶನಿವಾರ ನಡೆದಿದೆ.
ಬಿಜೆಪಿ ನಾಯಕರು ಬರುವ ಮುನ್ನವೇ ಪ್ರತಿಮೆ ಬಳಿ ಉಪಸ್ಥಿತರಿದ್ದು ಗೌರವ ಸಲ್ಲಿಸಿದ ಬರೋಡಾ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯ ಎಸ್ಸಿ, ಎಸ್ಟಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಥಾಕೋರ್ ಸೊಲಂಕಿ ಅವರು, ಬಿಜೆಪಿ ನಾಯಕರಿಂದ ಇಲ್ಲಿನ ಪರಿಸರ ಮಲಿನವಾಗಿದೆ ಎಂದು ದಲಿತ ನಾಯಕರೊಬ್ಬರು ಆರೋಪಿಸಿದ್ದಾರೆ.
ಸೊಲಂಕಿ ನೇತೃತ್ವದಲ್ಲಿ ದಲಿತ ಸಮುದಾಯದ ಸದಸ್ಯರು, ಕೇಂದ್ರ ಸಚಿವೆ ಹಾಗೂ ಅವರೊಂದಿಗೆ ಆಗಮಿಸಿದ್ದ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಇಬ್ಬರ ನಡುವೆ ಕೆಲಕಾಲ ವಾಗ್ವಾದ ಸಹ ನಡೆಯಿತು. ಆದರೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಬಿಜೆಪಿ ನಾಯಕರು ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸ್ಥಳದಿಂದ ತೆರಳಿದ ಬಳಿಕ ದಲಿತ ಸಮುದಾಯದ ಸದಸ್ಯರು, ಪ್ರತಿಮೆಯನ್ನು ಹಾಲು ಮತ್ತು ನೀರಿನಿಂದ ಸ್ವಚ್ಛಗೊಳಿಸಿದರು.