ವಡೊದರ: ನಗದು ಬಿಕ್ಕಟ್ಟು ಪರಿಹರಿಸದಿದ್ದರೆ ದೇಶಾದ್ಯಂತ ಮುಷ್ಕರ ನಡೆಸುವುದಾಗಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(ಎಐಬಿಇಎ) ಗುರುವಾರ ಎಚ್ಚರಿಕೆ ನೀಡಿದೆ.
ನಗದು ಕೊರತೆ ನೀಗಿಸಲು ಕೇವಲ ಹೇಳಿಕೆ ನೀಡದರೆ ಸಾಕಾಗುವುದಿಲ್ಲ. ನೋಟು ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ಅವರು ಹೇಳಿದ್ದಾರೆ.
ಕಳೆದ ಕೆಲವು ವಾರಗಳಿಂದ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳ ಎಟಿಎಂಗಳು ನಗದು ಕೊರತೆ ಎದುರಿಸುತ್ತಿವೆ.
ಹಣ ಸಿಗದೆ ಪರದಾಡುತ್ತಿರುವ ಜನ ಬ್ಯಾಂಕ್ ನೌಕರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ವೆಂಕಟಾಚಲಂ ಅವರು ತಿಳಿಸಿದ್ದಾರೆ.
ಬ್ಯಾಂಕ್ ನೌಕರರು ಯಾವುದೇ ತಪ್ಪು ಮಾಡದಿದ್ದರೂ ಗ್ರಾಹಕರಿಂದ ನಿಂದಿಸಿಕೊಳ್ಳುವ ಪರಿಸ್ಥಿತಿ ಬಂದಿದ್ದು, ಕೇಂದ್ರ ಸರ್ಕಾರ ಮತ್ತು ಆರ್ ಬಿಐ ಈ ಕೂಡಲೇ ನಗದು ಕೊರತೆ ನೀಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.