ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂವಿಧಾನ ಉಳಿಸಿ ಪ್ರಚಾರಕ್ಕೆ ಚಾಲನೆ ನೀಡುವ ಮೂಲಕ ಕಾಂಗ್ರೆಸ್ ಕುಟುಂಬ ರಾಜಕಾರಣ ರಕ್ಷಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ವಿರುದ್ಧದ ಪ್ರತಿಪಕ್ಷಗಳ ದ್ವೇಷದ ಕ್ರಮ ಭಾರತೀಯರ ದ್ವೇಷದ ಕ್ರಮವಾಗಿ ಪರಿವರ್ತನೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಟೀಕೆ ಬೆನ್ನಲ್ಲೇ ಮಾತನಾಡಿದ ಅಮಿತ್ ಶಾ, ವೈಯಕ್ತಿಕ ಉದ್ದೇಶದಿಂದ ಕಾಂಗ್ರೆಸ್ ಮಹಾಭಿಯೋಗದ ಮೂಲಕ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ವಜಾಗೊಳಿಸಲು ಮುಂದಾದದ್ದು, ಸಂವಿಧಾನಿಕ ಸಂಸ್ಥೆಯನ್ನು ದುರ್ಬಲಗೊಳಿಸುವ ನಡೆಯಾಗಿದ್ದು, ಕುಟುಂಬ ರಾಜಕಾರಣಕ್ಕೆ ಇಲ್ಲಿ ಉಳಿಗಾಲವಿಲ್ಲ ತಿರುಗೇಟು ನೀಡಿದರು.
ಕಾಂಗ್ರೆಸ್ 1975ರಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸುವ ಮೂಲಕ ಸಿಎಜಿ,ಚುನಾವಣಾ ಆಯೋಗ, ಸೇನೆ, ಸುಪ್ರೀಂಕೋರ್ಟ್ ಮತ್ತಿತರ ಎಲ್ಲಾ ಅಂಗಗಳನ್ನು ಹಕ್ಕುಗಳನ್ನು ಕಸಿದುಕೊಂಡಿತ್ತು ಎಂದು ಕಾಂಗ್ರೆಸ್ ವಿರುದ್ಧ ಶಾ ಹರಿಹಾಯ್ದರು.
ಯಾರೂ ಸೇನೆ, ನ್ಯಾಯಾಂಗ, ಸುಪ್ರೀಂಕೋರ್ಟ್, ಚುನಾವಣಾ ಆಯೋಗ, ವಿದ್ಯುನ್ಮಾನ ಮತಯಂತ್ರ, ಆರ್ ಬಿಐ ಮೇಲೆ ನಂಬಿಕೆ ಇಲ್ಲ ಎಂದು ಹೇಳುವರೋ ಅವರೇ ಈಗ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುತ್ತಿದ್ದಾರೆ. ಭಾರತ ಸದೃಢವಾದ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಹೊಂದಿದೆ ಎಂದು ಅಮಿತ್ ಶಾ ಹೇಳಿದರು.
ಸಂವಿಧಾನ ಉಳಿಸಿ ಪ್ರಚಾರದಿಂದ ಅಂತಹ ಉದ್ದೇಶವೇನೂ ಇಲ್ಲ. ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ. ಕಾಂಗ್ರೆಸ್ ನಿಂದ ಸಂವಿಧಾನವನ್ನು ಉಳಿಸಬೇಕಾಗಿದೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಕುಟುಂಬದಿಂದ ಅಂಬೇಡ್ಕರ್ ನಿರಂತರವಾಗಿ ಅವಮಾನ ಅನುಭವಿಸಿದರು. ಅವರು ಜೀವಂತವಾಗಿರುವಾಗಲೇ ನೆಹರೂ ಗಾಂಧಿ ಕುಟುಂಬದಿಂದ ಅಂಬೇಡ್ಕರ್ ಅಪಮಾನಕ್ಕೊಳಗಾಗಿದ್ದರು. ಈಗಲೂ ಕೂಡಾ ಅದಕ್ಕಿಂತಲೂ ಹೆಚ್ಚಾಗಿ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಅಮಿತ್ ಶಾ ಹೇಳಿದರು.
Advertisement