ನವದೆಹಲಿ: ಕತುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯೋಚಿತ ತನಿಖೆ ನಡೆಯುವ ಬಗ್ಗೆ ನಿಜವಾದ ಕಳವಳವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ, ನ್ಯಾಯೋಚಿತ ವಿಚಾರಣೆಯಲ್ಲಿ ಸಣ್ಣದೊಂದು ಕೊರತೆ ಕಂಡುಬಂದರೂ ಕೂಡ ಕತುವಾದ ಹೊರಗೆ ಪ್ರಕರಣವನ್ನು ವರ್ಗಾಯಿಸಲಾಗುವುದು ಎಂದು ಹೇಳಿದೆ. ಕೇವಲ ಆರೋಪಿಗಳಿಗೆ ಮಾತ್ರವಲ್ಲದೆ ಬಾಲಕಿಯ ಕುಟುಂಬದವರಿಗೆ ಸಹ ಸೂಕ್ತ ನ್ಯಾಯ ಮತ್ತು ರಕ್ಷಣೆ ಒದಗಿಸಿಕೊಡಬೇಕಾಗಿದ್ದು ಅವರ ವಕೀಲರಿಗೆ ಸಹ ಸರಿಯಾದ ಭದ್ರತೆ ಒದಗಿಸಿಕೊಡಬೇಕೆಂದು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಕತುವಾ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯವಾದಿಗಳು ತಪ್ಪಾಗಿ ನಡೆದುಕೊಂಡರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. ನ್ಯಾಯೋಚಿತವಾಗಿ ಪ್ರಕರಣದ ವಿಚಾರಣೆ ನಡೆಸುವುದು ಮುಖ್ಯವಾಗಿದೆ. ಈ ಬಗ್ಗೆ ತಮಗೆ ಆತಂಕವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜಮ್ಮುವಿನ ಕತುವಾ ಎಂಬಲ್ಲಿ ಕೆಳಜಾತಿಯ ಬುಡಕಟ್ಟು ಜನಾಂಗದ 8 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ ಕಳೆದ ಜನವರಿ 10ರಂದು ಅತ್ಯಾಚಾರವೆಸಗಲಾಗಿದ್ದು ಎಂಬ ಆರೋಪ ಕೇಳಿಬರುತ್ತಿದೆ. ಆಕೆಯ ಮೃತದೇಹ ಮನೆಯವರಿಗೆ ಒಂದು ವಾರ ಕಳೆದ ನಂತರ ಸಿಕ್ಕಿತ್ತು.
Advertisement