ಲಖನೌ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಸ್ ಪಿ, ಬಿಎಸ್ ಪಿ, ಕಾಂಗ್ರೆಸ್ ಮಹಾಮೈತ್ರಿಯ ನಡುವೆಯೂ ಉತ್ತರ ಪ್ರದೇಶದಲ್ಲಿ ಬಿಜೆಪಿ 2014ರ ಚುನಾವಣೆಗಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುನರ್ ಉಚ್ಚರಿಸಿದ್ದಾರೆ.
ಉತ್ತರ ಪ್ರದೇಶದ ದೇಶದಲ್ಲಿಯೇ ಅತಿ ಹೆಚ್ಚಿನ ಜನಸಂಖ್ಯೆ ವುಳ್ಳ ಹಾಗೂ ರಾಜಕೀಯ ನಿರ್ಣಾಯಕ ರಾಜ್ಯವಾಗಿದ್ದು, ದೆಹಲಿಯ ಸಿಂಹಾಸನಕ್ಕೆ ಹೋಗುವ ಮಾರ್ಗವಾಗಿ ಬಿಜೆಪಿಗೆ ಉತ್ತರ ಪ್ರದೇಶ ಪ್ರಮುಖ ಆದ್ಯತೆ ನೀಡಲಿದೆ ಎಂದು ಹೇಳಿದರು.
ಬಿಎಸ್ ಪಿ, ಎಸ್ ಪಿ, ಕಾಂಗ್ರೆಸ್ ಮಹಾಮೈತ್ರಿ ಮಾಡಿಕೊಂಡರೂ ಬಿಜೆಪಿ 74 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಲೋಕಸಭಾ ಚುನಾವಣೆ ನಂತರ ಬಿಜೆಪಿ ಮತ್ತಷ್ಟು ಸದೃಢಗೊಳ್ಳಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ ಕರಡು ವಿಚಾರದಲ್ಲಿ ಪ್ರತಿಪಕ್ಷಗಳ ಮೌನದ ವಿರುದ್ಧ ವಾಗ್ದಾಳಿ ನಡೆಸಿದರು. ಅಕ್ರಮ ವಲಸಿಗರನ್ನು ದೇಶದಿಂದ ಓಡಿಸಲು ಬಿಜೆಪಿ ಬದ್ದವಾಗಿದೆ ಎಂದು ಹೇಳಿದರು.
ಇತರ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮೂಲಕ ದಲಿತ ಮತ್ತು ಹಿಂದುಳಿದ ವರ್ಗಗಳ ಸಮುದಾಯ ಸದೃಢಗೊಳ್ಳುವಂತೆ ಬಿಜೆಪಿ ಮಾಡಿದೆ ಎಂದು ಅಮಿತ್ ಶಾ ತಿಳಿಸಿದರು.
Advertisement