ಕರುಣಾನಿಧಿ ನಂತರ ಡಿಎಂಕೆನಲ್ಲಿ ನಡೆಯುತ್ತಾ ಉತ್ತರಾಧಿಕಾರಿ ಕಲಹ?

ಐದು ದಶಕಗಳ ಕಾಲ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಅಧ್ಯಕ್ಷರಾಗಿ ನಾಲ್ಕು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಎಂ...
ಅಳಗಿರಿ - ಸ್ಟಾಲಿನ್
ಅಳಗಿರಿ - ಸ್ಟಾಲಿನ್
ಚೆನ್ನೈ: ಐದು ದಶಕಗಳ ಕಾಲ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಅಧ್ಯಕ್ಷರಾಗಿ ನಾಲ್ಕು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಎಂ ಕರುಣಾನಿಧಿ ಯುಗಾಂತ್ಯವಾಗಿದ್ದು, ಅವರ ನಂತರ ಪಕ್ಷದಲ್ಲಿ ಮತ್ತೆ ಉತ್ತರಾಧಿಕಾರಿ ಕಲಹ ಆರಂಭವಾಗುತ್ತಾ ಅಥವಾ ಕಲೈನಾರ್ ಜೀವಿತಾವಧಿಯಲ್ಲಿ ಉತ್ತರಾಧಿಕಾರಿಯಾಗಿ ಬಿಂಬಿತವಾಗಿದ್ದ ಎಂ ಕೆ ಸ್ಟಾಲಿನ್ ಅವರೇ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆಯೇ? ಎಂಬ ಪ್ರಶ್ನೆ ಈಗ ಲಕ್ಷಾಂತರ ಕಾರ್ಯಕರ್ತರನ್ನು ಕಾಡುತ್ತಿದೆ.
ಎರಡನೇ ಪತ್ನಿ ದಯಾಳು ಅಮ್ಮಾಳ್ ಅವರ ಉದರದಲ್ಲಿ ಜನಿಸಿದ ಎರಡನೇ ಪುತ್ರ ಸ್ಟಾಲಿನ್ ಅವರ ಮೇಲೆ ಕರುಣಾನಿಧಿ ಅವರಿಗೆ ತುಸು ಹೆಚ್ಚು ಪ್ರೀತಿ. ಇದೇ ಕಾರಣಕ್ಕೆ ರಾಜಕೀಯ ಪಟ್ಟುಗಳನ್ನು ಮತ್ತು ಪಕ್ಷವನ್ನು ಬೇರುಮಟ್ಟದಿಂದಸಂಘಟಿಸುವ ಕಲೆ ಹೇಳಿಕೊಟ್ಟಿದ್ದಾರೆ. ಆದರೆ ತಂದೆಯ ಅನುಪಸ್ಥಿತಿಯಲ್ಲೇ ಕುಟುಂಬದ ಒಳಗೇ ವ್ಯಕ್ತವಾಗುವ ವಿರೋಧ ಎದುರಿಸುವುದೇ ಸ್ಟಾಲಿನ ಮುಂದಿರುವ ದೊಡ್ಡ ಸವಾಲಾಗಿದೆ.
ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಕರುಣಾನಿಧಿಯ ಮೊತ್ತಬ್ಬ ಪುತ್ರ ಎಂ.ಕೆ.ಅಳಗಿರಿಯನ್ನು 2014ರಿಂದ ಪಕ್ಷದಿಂದ ಉಚ್ಚಾಟಿಸಲಾಗಿದ್ದು, ಇದಕ್ಕು ಮುನ್ನ ಹಲವು ಬಾರಿ ಸ್ಟಾಲಿನ್ ನಾಯಕತ್ವಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. 
ಡಿಎಂಕೆ ಒಂದು ಮಠ ಎನ್ನುವುದಾದರೆ ಅದರ ಮಠಾಧಿಶ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತಾರೆ ಎಂದು ಅಳಗಿರಿ ಹೇಳಿದ್ದರು. ಕರುಣಾನಿಧಿ ಆಸ್ಪತ್ರೆ ಸೇರಿದ ನಂತರ ಮತ್ತೆ ಆಸ್ಪತ್ರೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಸೇರಿಕೊಂಡಿರುವ ಅಳಗಿರಿ ಈಗ ಪಕ್ಷದ ಉತ್ತರಾಧಿಕಾರಕ್ಕಾಗಿ ಹೋರಾಟ ನಡೆಸುವ ಸಾಧ್ಯತೆ ಇದೆ.
ಉತ್ತರಾಧಿಕಾರಿ ಕಲಹವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಡಿಎಂಕೆ ನಾಯಕರೊಬ್ಬರು, ಅಳಗಿರಿ ಮತ್ತು ಸ್ಟಾಲಿನ್ ನಡುವೆ ಮತ್ತೆ ಕಲಹ ನಡೆಯುವುದಿಲ್ಲ. ಕರುಣಾನಿಧಿ ಆರೋಗ್ಯ ಗಂಭೀರವಾದ ನಂತರ ಪ್ರತಿಯೊಂದು ವಿವಾದವನ್ನು ಇತ್ಯರ್ಥಪಡಿಸಲಾಗಿದೆ. ಉತ್ತರಾಧಿಕಾರಿಗಾಗಿ ಮುಂದೆ ಯಾವುದೇ ಕಲಹ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಸಹೋದರರ ನಡುವಿನ ಕಲಹಕ್ಕೆ ಅಂತ್ಯವೇ ಇಲ್ಲ. ಸ್ಟಾಲಿನ್ ಅವರು ಆಂತರಿಕ ರಾಜಕೀಯ ಮಾಡಲೇಬೇಕು ಎಂದು ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಶ್ಯಾಮ್ ಷಣ್ಮುಗಮ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com