ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರಿಗೆ ಸಂತಾಪ ಸೂಚಿಸಲು ಆಗಸ್ಟ್ 14ರಂದು ತುರ್ತು ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ ಎಂದು ಶುಕ್ರವಾರ ಡಿಎಂಕೆ ತಿಳಿಸಿದೆ.
ಆಗಸ್ಟ್ 14ರಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ತಪ್ಪದೆ ಭಾಗವಹಿಸುವಂತೆ ಪಕ್ಷದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರಿಗೆ ಸೂಚಿಸಲಾಗಿದೆ.
ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸುವುದು ಕಾರ್ಯಕಾರಿ ಸಮಿತಿಯ ಅಜೆಂಡಾ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ ಅನ್ಬಳಗನ್ ಅವರು ತಿಳಿಸಿದ್ದಾರೆ.
1969ರಲ್ಲಿ ಡಿಎಂಕೆ ಸಂಸ್ಥಾಪಕ ಹಾಗೂ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಸಿಎನ್ ಅಣ್ಣಾದೊರೈ ಅವರು ನಿಧನವಾದ ನಂತರ ಇದೇ ರೀತಿಯ ಸಭೆ ಕರೆಯಲಾಗಿತ್ತು ಅವರು ಹೇಳಿದ್ದಾರೆ.
ಇದೇ ವೇಳೆ ಕಾರ್ಯಕಾರಿ ಸಭೆಯಲ್ಲಿ ಇತರೆ ವಿಷಯಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅನ್ಬಳಗನ್ ಅವರು, ಸದ್ಯ ಸಂತಾಪ ಸೂಚನೆ ಒಂದೇ ಅಜಂಡಾದಲ್ಲಿದೆ. ಸಾಮಾನ್ಯ ಕೌನ್ಸಿಲ್ ಸಭೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದರು.
ಪಕ್ಷದ ಮೂಲಗಳ ಪ್ರಕಾರ, ಎಂ.ಕೆ.ಸ್ಟಾಲಿನ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಡಿಎಂಕೆ ಸಿದ್ಧತೆ ನಡೆಸಿದ್ದು, ಈ ಸಂಬಂಧ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಿದೆ.