ಮುಂಬೈ: ಐಐಟಿ ಬಾಂಬೆಗೆ 1 ಸಾವಿರ ಕೋಟಿ ರುಪಾಯಿ ನೆರವು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಐಐಟಿಗಳು ತಂತ್ರಜ್ಞಾನ ಸಂಸ್ಥೆಗಳು ಮಾತ್ರವಲ್ಲ. ಅವು ಭಾರತದ ಪರಿವರ್ತನೆಯ ಸಾಧನಗಳು ಎಂದು ಶನಿವಾರ ಹೇಳಿದ್ದಾರೆ.
ಇಂದು ಐಐಟಿ ಬಾಂಬೆಯ 56ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ, ಹೊಸ ಹೊಸ ಆವಿಷ್ಕಾರಗಳು ಮತ್ತು ಉದ್ಯಮಶೀಲತೆ ಭಾರತ ಆರ್ಥಿಕ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ನಿರ್ಮಿಸಲು ಅಡಿಪಾಯವಾಗುತ್ತಿವೆ ಎಂದರು.
ನಿಮ್ಮ ಮುಖದಲ್ಲಿರುವ ವಿಶ್ವಾಸ ನೋಡಿದರೆ ನಾವು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ. ಉತ್ತಮ ಯೋಚನೆಗಳು ಸರ್ಕಾರಿ ಕಟ್ಟಡಗಳಲ್ಲಿ ಅಥವಾ ಅಲಂಕಾರಿಕ ಕಚೇರಿಗಳಲ್ಲಿ ಹುಟ್ಟುವುದಿಲ್ಲ. ಉತ್ತಮ ಯೋಚನೆಗಳು ಐಐಟಿ ಬಾಂಬೆಯಂತಹ ಕ್ಯಾಂಪಸ್ ಗಳಲ್ಲಿ ಹುಟ್ಟುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ.
ಹೊಸ ಹೊಸ ಆವಿಷ್ಕಾರಗಳು ನಡೆಯದೇ ಇದ್ದರೆ ಸಮಾಜ ಅಭಿವೃದ್ಧಿಯಾಗುವುದಿಲ್ಲ. ಭಾರತ ಈಗ ಸ್ಟಾರ್ಟ್ ಅಪ್ ಗಳ ತಾಣವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಹೊಸ ಆವಿಷ್ಕಾರಗಳ ತುಡಿತ ಕಾಣಿಸುತ್ತಿದೆ ಎಂದರು.
ಇದೇ ವೇಳೆ ಹವಾಮಾನ ವೈಪರೀತ್ಯವನ್ನು ನಿಯಂತ್ರಿಸುವ, ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ, ಸ್ವಚ್ಛವಾದ ಗಾಳಿ, ನೀರಿನ ಸಂರಕ್ಷಣೆ, ಅಪೌಷ್ಠಿಕತೆ ಮತ್ತು ತ್ಯಾಜ್ಯ ಸಂಸ್ಕರಣೆ ಬಗ್ಗೆ ಹೊಸ ಹೊಸ ಆವಿಷ್ಕಾರಗಳನ್ನು ನಡೆಸಬೇಕು ಎಂದು ಐಐಟಿ ವಿದ್ಯಾರ್ಥಿಗಳಿಗೆ ಪ್ರಧಾನಿ ಕರೆ ನೀಡಿದರು.