ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಜಮ್ಮು ಕಾಶ್ಮೀರ ಸೇರಿ ಹಲವು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಿ ಆದೇಶಿಸಿದ್ದಾರೆ.
ಪ್ರಸ್ತುತ ಬಿಹಾರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರನ್ನು ಜಮ್ಮು ಕಾಶ್ಮೀರದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಮಲಿಕ್ ಇದುವರೆಗೆ ಕಾಶ್ಮೀರ ರಾಜ್ಯಪಾಲರಾಗಿದ್ದ ಎನ್.ಎನ್. ವೋಹ್ರಾ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಇದೇ ವೇಳೆ ಮಲಿಕ್ ಅವರಿಂದ ತೆರವಾದ ಸ್ಥಾನಕ್ಕೆ ಹಿರಿಯ ಬಿಜೆಪಿ ಮುಖಂಡ ಲಾಲ್ ಜೀ ಟಂಡನ್ ಅವರನ್ನು ನೇಮಕ ಮಾಡಲಾಗಿದ್ದು ಟಂಡನ್ ಬಿಹಾರದ ನೂತನ ರಾಜ್ಯಪಾಲರಾಗಿದ್ದಾರೆ.
ಇದರೊಡನೆಯೇ ಬೇಬಿ ರಾಣಿ ಮೌರ್ಯ ಉತ್ತರಾಖಂಡದ ಹೊಸ ರಾಜ್ಯಪಾಲರಾಗಿ ಆಯ್ಕೆಯಾದರೆ ಹರಿಯಾಣದ ರಾಜ್ಯಪಾಲ ಕಫ್ತಾನ್ ಸಿಂಗ್ ಸೋಲಂಕಿ ಅವರನ್ನು ತ್ರಿಪುರಾಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
ತ್ರಿಪುರಾ ರಾಜ್ಯಪಾಲರಾಗಿದ್ದ ತಥಾಗಥ ರಾಯ್ ಅವರನ್ನು ಮೇಘಾಲಯಕ್ಕೆ ವರ್ಗಾವಣೆ ಮಾಡಲಾಗಿದ್ದು ಪ್ರಸಕ್ತ ಮೇಘಾಲಯ ರಾಜ್ಯಪಾಲರಾಗಿದ್ದ ಗಂಗಾ ಪ್ರಸಾದ್`ಅವರನ್ನು ಸಿಕ್ಕಿಂ ಗೆ ವರ್ಗಾವಣೆ ಮಾಡಲಾಗಿದೆ.