ಚಂಡಿಗಢ: ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸಮಾಂಭರದಲ್ಲಿ ಭಾಗವಹಿಸಿದ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ, ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು, ಪಾಕ್ ಗೆ ತೆರಳುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಪಡೆದಿರುವುದಾಗಿ ಮಂಗಳವಾರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಧು, ನೆರೆಯ ಪಾಕಿಸ್ತಾನಕ್ಕೆ ಭೇಟಿ ನೀಡಲು ನಿಮಗೆ ಅನುಮತಿ ನೀಡಲಾಗಿದೆ ಎಂದು ಸ್ವತಃ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ನನಗೆ ಕರೆ ಮಾಡಿ ಹೇಳಿದ್ದರು ಎಂದರು.
ಇಮ್ರಾನ್ ಖಾನ್ ಅವರು ನನಗೆ ಆಹ್ವಾನ ಕಳುಹಿಸಿದ್ದರು. ಹೀಗಾಗಿ ನಾನು ಪಾಕ್ ಗೆ ತೆರಳಲು ಕೇಂದ್ರ ಸರ್ಕಾರದ ಅನುಮತಿ ಕೋರಿದ್ದೆ. ಪಾಕಿಸ್ತಾನ ಸರ್ಕಾರ ವೀಸಾ ನೀಡಿದ ಎರಡು ದಿನಗಳ ನಂತರ ಸುಷ್ಮಾ ಸ್ವರಾಜ್ ಅವರು ಕರೆ ಮಾಡಿ, ನಿಮಗೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದರು ಎಂದು ಸಿಧು ತಿಳಿಸಿದ್ದಾರೆ.
ಪಾಕಿಸ್ತಾನ ಸೇನಾ ಮುಖ್ಯಸ್ಥರು ನನ್ನ ತಬ್ಬಿಕೊಂಡಿದ್ದಕ್ಕೆ ಸುಖಾಸುಮ್ಮನೆ ವಿವಾಗದ ಎಬ್ಬಿಸಲಾಗುತ್ತಿದೆ,. ನಾನು ಏನು ಮಾಡಬೇಕು ಎಂದು ಯಾರು ನನಗೆ ಹೇಳುವ ಅಗತ್ಯವಿಲ್ಲ, ನನ್ನ ಆತ್ಮ ಸಾಕ್ಷಿಯ ಪ್ರಕಾರ ನಾನು ನಡೆದುಕೊಳ್ಳುತ್ತೇನೆ ಎಂದು ಕಿಡಿಕಾರಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೂಡ ಲಾಹೋರ್ ಗೆ ಭೇಟಿ ನೀಡಿದ್ದರು. ಶಾಂತಿ ಸ್ಥಾಪನೆ ಮಾಡಲು ಈ ಹಿಂದೆಯೂ ಪ್ರಯತ್ನಗಳು ನಡೆದಿವೆ, ಪ್ರಧಾನಿ ಮೋದಿ ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ನವಾಜ್ ಷರೀಫ್ ಅವರನ್ನು ಆಹ್ವಾನಿಸಿದ್ದರು, ಜೊತೆಗೆ ಮೋದಿ ಕೂಡ ಲಾಹೋರ್ ಗೆ ಬೇಟಿ ನೀಡಿದ್ದರು.
ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ, ಇಮ್ರಾನ್ ಖಾನ್ ನನ್ನ ,ಸ್ನೇಹಿತರು, ತಮ್ಮ ಭಾಷಣದಲ್ಲಿ ನೆರೆಯ ದೇಶದೊಂದಿಗೆ ಶಾಂತಿ ಕಾಪಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುವ ಭರವಸೆ ನೀಡಿದ್ದಾರೆ ಎಂದು ಸಿಧು ಹೇಳಿದ್ದಾರೆ.