ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಅವರ ನಿಧನ ಹಿನ್ನಲೆಯಲ್ಲಿ ಆಯೋಜಿಸಿರುವ ಸಂತಾಪ ಸಭೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಆಹ್ವಾನಿಸಿದ ದಿನದಿಂದ ಎರಡೂ ಪಕ್ಷಗಳ ನಡುವೆ ಮೈತ್ರಿಯ ಸಾಧ್ಯತೆಯ ಊಹಾಪೋಹ ಕೇಳಿಬರುತ್ತಿದೆ. ಮಾಜಿ ಕೇಂದ್ರ ಸಚಿವ ಟಿ ಆರ್ ಬಾಲು ಖುದ್ದಾಗಿ ಬಿಜೆಪಿ ಅಧ್ಯಕ್ಷರಿಗೆ ಕರುಣಾನಿಧಿಯವರಿಗೆ ಸಂತಾಪ ಸೂಚಕ ಸಭೆಗೆ ಆಹ್ವಾನಿಸಿದ್ದು, ಇದಕ್ಕೆ ಅಮಿತ್ ಶಾ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಳೆದ ರಾತ್ರಿ ಡಿಎಂಕೆ ಪಕ್ಷದವರನ್ನು ಸಂಪರ್ಕಿಸಿದಾಗ ಆಗಸ್ಟ್ 30ರಂದು ನಡೆಯುವ ಸಭೆಯಲ್ಲಿ ಅಮಿತ್ ಶಾ ಅವರು ಭಾಗವಹಿಸುವ ಬಗ್ಗೆ ನಮಗೆ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದಿದ್ದಾರೆ.
ಈ ಮಧ್ಯೆ ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮ ವೆಲ್ಲೂರಿಗೆ ಬಂದಿದ್ದಾಗ ಗೌರವ ನಮನ ಸಲ್ಲಿಸಲು ಹೋಗಿದ್ದರು ಮತ್ತು ಮಾಜಿ ಸಚಿವ ಕೆ ಪಿಚಂಡಿ ತಿರುವನ್ನಮಲೈಯಲ್ಲಿ ಗೌರವ ಸೂಚಿಸಿದ್ದರು.
ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದ್ದು ಬಿಜೆಪಿಯ ಹಿರಿಯ ನಾಯಕ ಸುಬ್ರಹ್ಮಣ್ಯ ಸ್ವಾಮಿಯವರು ಮೊನ್ನೆ ಶುಕ್ರವಾರ ಮಾಡಿರುವ ಟ್ವೀಟ್. ಡಿಎಂಕೆ ಸಭೆಗೆ ಹೋಗದಿರಲು ಅಮಿತ್ ಶಾ ಅವರು ನಿರ್ಧರಿಸಿದ್ದು ಒಳ್ಳೆಯದೇ ಆಯಿತು ಎಂದಿದ್ದರು. ಡಿಎಂಕೆಯ ಸಂತಾಪ ಸೂಚಕ ಸಭೆಗೆ ಅಮಿತ್ ಶಾ ಅವರು ಭಾಗವಹಿಸುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಪರ, ವಿರೋಧ ಚರ್ಚೆಗಳು ಶುರುವಾಗಿವೆ.
Advertisement