ನವದೆಹಲಿ: ಇವಿಎಂ ಯಂತ್ರಕ್ಕೆ ಬದಲು ಬ್ಯಾಲಟ್ ಪೇಪರ್ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ.
ಈ ಸಂಬಂಧ ಪತ್ರ ಬರೆದಿರುವ ಕಾಂಗ್ರೆಸ್, ದೇಶದಲ್ಲಿ ಪಾರದರ್ಶಕ ಚುನಾವಣೆಗಾಗಿ ಬ್ಯಾಲಟ್ ಪೇಪರ್ ಮತ್ತೆ ತರುವಂತೆ ಕಾಂಗ್ರೆಸ್ ಒತ್ತಾಯಿಸಿದೆ, ದೋಷಪೂರಿತ ಇವಿಎಂಗಳಿಂದಾಗಿ ಪ್ರಜಾಪ್ರಭುತಕ್ಕೆ ಧಕ್ಕೆಯಾಗುತ್ತಿದೆ ಎಂದು ಹೇಳಿದೆ.
ಇವಿಎಂ ವಿರುದ್ಧ ಕೇವಲ ಕಾಂಗ್ರೆಸ್ ಮಾತ್ರವಲ್ಲ, ಟಿಎಂಸಿ, ಜೆಡಿಎಸ್, ಎನ್ ಸಿಪಿ, ಎಸ್ ಪಿ, ಸಿಪಿಐ-ಎಂ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಬ್ಯಾಲಟ್ ಪೇಪರ್ ಪರ ಒಲವು ತೋರಿವೆ, ಎನ್ ಡಿಎ ಮೈತ್ರಿ ಪಕ್ಷ ಶಿವ ಸೇನೆ ಕೂಡ ಇವಿಎಂ ಯಂತ್ರದ ವಿರುದ್ಧ ಧ್ವನಿ ಎತ್ತಿದೆ.
ಇಂದು ಕೇಂದ್ರ ಚುನಾವಣಾ ಆಯೋಗದ ಜೊತೆ ನಡೆಯಲಿರುವ ಸಭೆಯಲ್ಲಿ ಈ ಎಲ್ಲಾ ಪಕ್ಷಗಳು ಇವಿಎಂ ಯಂತ್ರದ ಬಗ್ಗೆ ಪ್ರಶ್ನೆ ಎತ್ತಲಿವೆ ಎಂದು ತಿಳಿದು ಬಂದಿದೆ.