ಗೋದ್ರಾ ಹತ್ಯಾಕಾಂಡ ತೀರ್ಪು ಪ್ರಕಟ: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

2002 ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಕುರಿತಂತೆ ಇಂದು (ಸೋಮವಾರ) ವಿಶೇಷ ಎಸ್ ಐಟಿ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಹಮದಾಬಾದ್: 2002 ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಕುರಿತಂತೆ ಇಂದು (ಸೋಮವಾರ) ವಿಶೇಷ ಎಸ್ ಐಟಿ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
 ವಿಶೇಷ ನ್ಯಾಯಾಧೀಶ ಎಚ್. ಸಿ. ವೊರಾ ನೀಡಿದ ತೀರ್ಪಿನಲ್ಲಿ ಫಾರೂಕ್ ಬಾನಾ ಹಾಗೂ ಇಮ್ರಾನ್ ಶೇರು ಅವರುಗಳಿಗೆ  ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.
ಇನ್ನು ಪ್ರಕರಣದಲ್ಲಿ  ಇತರೆ ಮೂವರು ಆರೋಪಿಗಳಾಗಿದ್ದ ಹುಸೇನ್ ಸುಲೇಮಾನ್ ಮೋಹನ್, ಕಸಮ್ ಭಮೇದಿ ಹಾಗೂ  ಫರೂಕ್ ಧಾಂಟಿಯಾ  ಅವರುಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
2015-2016ರಲ್ಲಿ ಈ ಐವರನ್ನು ಸಹ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಸಾಬರ್ಮತಿ ಸೆಂಟ್ರಲ್ ಜೈಲಿನ ವಿಶೇಷ ನ್ಯಾಯಾಲಯದಲ್ಲಿ ಇವರ ವಿಚಾರಣೆ ನಡೆದಿತ್ತು.
ಪ್ರಕರಣದಲ್ಲಿ ಆರೋಪಿಗಳಾಗಿರುವವರಲ್ಲಿ ಇನ್ನೂ ಎಂಟು ಮಂದಿ ತಲೆಮರೆಸಿಕೊಂಡಿದ್ದು ಮಾರ್ಚ್ 1, 2011 ರಂದು ವಿಶೇಷ ಎಸ್ ಐಟಿ ನ್ಯಾಯಾಲಯವು ಪ್ರಕರಣ ಕುರಿತು ಆರೋಪಪಟ್ಟಿ ದಾಖಲಿಸಿದಾಗ ಒಟ್ಟು 31 ಜನರ ಮೇಲೆ ದೋಷಾರೋಪಣೆ ಮಾಡಿತ್ತು. ಇದರಲ್ಲಿ 11 ಮಂದಿಗೆ ಮರಣದಂಡನೆ ಹಾಗೂ 20 ಇತರರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಆದಾಗ್ಯೂ, 2017 ರ ಅಕ್ಟೋಬರ್ ನಲ್ಲಿ ಗುಜರಾತ್ ಹೈಕೋರ್ಟ್ ಸಹ 11 ಆರೋಪಿಗಳನ್ನು ಮರಣದಂಡನೆ ಶಿಕ್ಷೆಗೆ ಗುರಿಪಡಿಸಿತ್ತು.
2002 ರ ಫೆಬ್ರುವರಿ 27 ರ ಗೋಧ್ರಾ ರೈಲು ದುರಂತ ಘಟನೆಯಲ್ಲಿ 59 ಕರಸೇವಕರು ಸಜೀವ ದಹನವಾಗಿದ್ದರು. ಗುಜರಾತಿನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಕೋಮು ಗಲಭೆಗೆ ಈ ದುರಂತ ಕಾರಣವಾಗಿತ್ತು. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 1,000 ಕ್ಕಿಂತ ಹೆಚ್ಚಿನ ಜನರು ಕೊಲ್ಲಲ್ಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com