ಭಾರತವನ್ನು ಕೇಸರಿಕರಣಗೊಳಿಸಲು ಮೋದಿ ಸರ್ಕಾರ ಯತ್ನ: ಡಿಎಂಕೆ ನೂತನ ಅಧ್ಯಕ್ಷ ಸ್ಟ್ಯಾಲಿನ್
ಡಿಎಂಕೆ ಬಿಜೆಪಿ ಮೈತ್ರಿಯತ್ತ ವಾಲಬಹುದೆಂಬ ವಿಶ್ಲೇಷಣೆಗಳನ್ನೆಲ್ಲಾ ಅಚ್ಚರಿಗೊಳಿಸುವಂತೆ ಡಿಎಂಕೆ ನೂತನ ಅಧ್ಯಕ್ಷ ಎಂಕೆ ಸ್ಟ್ಯಾಲಿನ್ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚೆನ್ನೈ: ಡಿಎಂಕೆ ಬಿಜೆಪಿ ಮೈತ್ರಿಯತ್ತ ವಾಲಬಹುದೆಂಬ ವಿಶ್ಲೇಷಣೆಗಳನ್ನೆಲ್ಲಾ ಅಚ್ಚರಿಗೊಳಿಸುವಂತೆ ಡಿಎಂಕೆ ನೂತನ ಅಧ್ಯಕ್ಷ ಎಂಕೆ ಸ್ಟ್ಯಾಲಿನ್ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತವನ್ನು ಕೇಸರೀಕರಣಗೊಳಿಸಲು ಯತ್ನಿಸುತ್ತಿದ್ದು ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕೆಂದು ಪದಗ್ರಹಣ ಸಮಾರಂಭದ ಬಳಿಕ ಮಾತನಾಡಿರುವ ಎಂಕೆ ಸ್ಟ್ಯಾಲಿನ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸ್ಟ್ಯಾಲಿನ್ ಮಾತನಾಡಿದ್ದು, ದೇಶದ್ಲಲಿ ಒಂದೇ ಭಾಷೆಯ ಪ್ರಾಬಲ್ಯವಿರಬೇಕೆನ್ನುವ ಪಕ್ಷವನ್ನು ವಿರೋಧಿಸಲೇಬೇಕು ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ರಾಜ್ಯಸರ್ಕಾರಗಳ ಹಕ್ಕನ್ನು ಕಸಿದುಕೊಳ್ಳುತ್ತಿದ್ದು ಭಾರತವನ್ನು ಕೇಸರಿಕರಣಗೊಳಿಸಲು ಯತ್ನಿಸುತ್ತಿದೆ, ಈ ಸರ್ಕಾರಕ್ಕೆ ಪಾಠ ಕಲಿಸಬೇಕಿದೆ, ರಾಜ್ಯದಲ್ಲಿರುವ ಜನವಿರೋಧಿ, ಗಟ್ಟಿ ನಿಲುವು ಹೊಂದದ ಎಐಎಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಸ್ಟ್ಯಾಲಿನ್ ಹೇಳಿದ್ದಾರೆ.
ಡಿಎಂಕೆ ದೇವರುಗಳ ವಿರೋಧಿಯಲ್ಲ. ಪೆರಿಯಾರ್ ಕಾಲದಲ್ಲಿದ್ದ ವಿಚಾರವಾದಿ ನೀತಿಗಳಿಗೆ ಹಿಂತಿರುಗುವುದಿಲ್ಲ, ಹಾಗೆಂದ ಮಾತ್ರಕ್ಕೆ ಇ.ವಿ ರಾಮಸ್ವಾಮಿ ಪೆರಿಯಾರ್ ನ ನೀತಿಗಳಿಂದ ಹಿಂದೆ ಸರಿಯುವುದೂ ಇಲ್ಲ ಎಂದು ಸ್ಟ್ಯಾಲಿನ್ ತಿಳಿಸಿದ್ದಾರೆ.