ನವದೆಹಲಿ: ದುಬೈ ನಿಂದ ಗಡಿಪಾರಾಗಿ ಭಾರತಕ್ಕೆ ಬಂದಿರುವ ಬಹುಕೋಟಿ ವಿವಿಐಪಿ ಕ್ಯಾಪ್ಟರ್ ಹಗರಣದ ಪ್ರಮುಖ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಅವರನ್ನು ದೆಹಲಿ ಕೋರ್ಟ್ ಸೋಮವಾರ ಮತ್ತೆ ಐದು ದಿನ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ.
ಕಳೆದ ವಾರ ಕ್ರಿಶ್ಚಿಯನ್ ಮೈಕೆಲ್ ಅವರನ್ನು ವಿಚಾರಣೆಗಾಗಿ ದೆಹಲಿ ಪಟಿಯಾಲ ಕೋರ್ಟ್ ಐದು ದಿನ ಸಿಬಿಐ ವಶಕ್ಕೆ ನೀಡಿತ್ತು. ಇಂದು ಮತ್ತೆ ಸಿಬಿಐ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರ ಮುಂದೆ ಹಾಜರುಪಡಿಸಿದ ಸಿಬಿಐ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಐದು ದಿನ ತನ್ನ ವಶಕ್ಕೆ ಪಡೆದಿದೆ.
ಪ್ರಕರಣದ ತನಿಖೆಗೆ ಆರೋಪಿ ಮೈಕೆಲ್ ಸರಿಯಾಗಿ ಸಹಕರಿಸುತ್ತಿಲ್ಲ. ಹೀಗಾಗಿ 9 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಸಿಬಿಐ ಮನವಿ ಮಾಡಿತ್ತು. ಇದಕ್ಕೆ ಮೈಕೆಲ್ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ ಕೋರ್ಟ್ ಆರೋಪಿಯನ್ನು ಐದು ದಿನ ಸಿಬಿಐ ವಶಕ್ಕೆ ನೀಡಿದೆ.
12 ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್ಪಿ ತ್ಯಾಗಿ ಸೇರಿದಂತೆ 9 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಈ ಒಪ್ಪಂದದಿಂದ ಸರ್ಕಾರದ ಖಜಾನೆಗೆ 2,666 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದೆ.
ಈ ಒಪ್ಪಂದವು ಸಾಕಾರಗೊಳ್ಳಲು ನೆರವಾಗುವ ಕಾರ್ಯಕ್ಕೆ ಅಗಸ್ಟವೆಸ್ಟ್ಲ್ಯಾಂಡ್ ಸಂಸ್ಥೆಯಿಂದ ಕ್ರಿಶ್ಚಿಯನ್ ಮೈಕೆಲ್ ಸುಮಾರು 225 ಕೋಟಿ ರು. ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.