ಭೂಪಾಲ್ : ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇನ್ನೂ ಪ್ರಗತಿಯಲ್ಲಿರುವಂತೆ ಬಹುಮತದತ್ತ ಹೆಜ್ಜೆ ಹಾಕಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಸಿದ್ಧತೆ ನಡೆಸತೊಡಗಿದೆ.
ಸರ್ಕಾರ ರಚನೆ ಸಂಬಂಧ ಹಕ್ಕು ಮಂಡಿಸಲು ತಡರಾತ್ರಿ ರಾಜ್ಯಪಾಲರ ಭೇಟಿಗೆ ಅನುಮತಿ ಕೇಳಿದೆ. ಮಧ್ಯಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕಮಲ್ ನಾಥ್ ಇ- ಮೇಲ್ ಮತ್ತು ಪ್ಯಾಕ್ಸ್ ರವಾನಿಸುವ ಮೂಲಕ ರಾಜ್ಯಪಾಲರ ಭೇಟಿಗೆ ಅನುಮತಿ ಕೋರಿದ್ದಾರೆ.
ಇನ್ನೂ ಮತಎಣಿಕೆ ಮುಂದುವರೆದಿದ್ದು, ಕಾಂಗ್ರೆಸ್ ಪಕ್ಷ 75 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 39 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 74 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 35 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಆದರೆ, ಚುನಾವಣಾ ಆಯೋಗ ಸ್ಪಷ್ಟ ಫಲಿತಾಂಶ ನೀಡಿದ ಬಳಿಕವೇ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಅವಕಾಶ ನೀಡುವುದಾಗಿ ರಾಜಭವನ ಹೇಳಿಕೆ ನೀಡಿದೆ.