ರಫೇಲ್ ವಿವಾದ: ನಾಳೆ 'ಸುಪ್ರೀಂ' ತೀರ್ಪು ಪ್ರಕಟ

ಬಹುಕೋಟಿ ರಫೇಲ್​ ಯುದ್ಧ ವಿಮಾನ ಖರೀದಿ ಹಗರಣದ ಕುರಿತು ಸುಪ್ರೀಂ ಕೋರ್ಟ್​ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು....
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on
ನವದೆಹಲಿ: ಬಹುಕೋಟಿ ರಫೇಲ್​ ಯುದ್ಧ ವಿಮಾನ ಖರೀದಿ ಹಗರಣದ ಕುರಿತು ಸುಪ್ರೀಂ ಕೋರ್ಟ್​ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ್ದ ಸರ್ವೋಚ್ಛ ನ್ಯಾಯಾಲಯ ಶುಕ್ರವಾರ ಅಂತಿಮ ತೀರ್ಪು ಪ್ರಕಟಿಸಲಿದೆ.
ವಕೀಲರಾದ ಪ್ರಶಾಂತ್​ ಭೂಷಣ್​, ಎಂಎಲ್ ಶರ್ಮಾ, ಮಾಜಿ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್​ ಶೌರಿ ಅವರು ರಫೇಲ್​ ವಿಮಾನ ಖರೀದಿ ಪ್ರಕ್ರಿಯೆ ಕುರಿತು ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 
ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಪೀಠ, ನವೆಂಬರ್ 14 ರಂದು ತೀರ್ಪು ಕಾಯ್ದಿರಿಸಿತ್ತು.
ಪ್ರತಿಯೊಂದು ರಫೇಲ್​ ಯುದ್ಧವಿಮಾನದ ದರ 155 ಮಿಲಿಯನ್​ ಯೂರೋ ಇತ್ತು, ಆದರೆ ಪ್ರಸ್ತುತ ಈ ದರ 270 ಮಿಲಿಯನ್​ ಯೂರೋಗೆ ಏರಿಕೆಯಾಗಿದೆ. ಇದು ಯುದ್ಧ ವಿಮಾನದ ದರ ಶೇ. 40ರಷ್ಟು ಏರಿಕೆಯಾಗಿರುವುದನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಹಗರಣ ನಡೆದಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು  ಪ್ರಶಾಂತ್​ ಭೂಷಣ್​ ಅವರು ವಾದಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಅವರು ರಫೇಲ್​ ಯುದ್ಧ ವಿಮಾನದ ಬೆಲೆಯ ಕುರಿತಾದ ಗೌಪ್ಯತೆಯ ಷರತ್ತನ್ನು ಸಮರ್ಥಿಸಿಕೊಂಡರು. ವಿಮಾನದ ಬೆಲೆಯ ಕುರಿತು ಸಂಸತ್ತಿನಲ್ಲೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ, ಹಾಗಾಗಿ ಅದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಜತೆಗೆ ಯಾವ ವಿಮಾನ ಅಥವಾ ಶಸ್ತ್ರಾಸ್ತ್ರವನ್ನು ಖರೀದಿಸಬೇಕು ಎಂಬುದು ತಜ್ಞರಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ನ್ಯಾಯಾಂಗ ಈ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳಲು ಬಾರದು ಎಂದು ವಾದಿಸಿದ್ದರು.
ವಾದ-ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ನಾಳೆ ತನ್ನ ಆದೇಶ ಪ್ರಕಟಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com