ದೇಶ
ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ವಿರುದ್ಧ ಕೋರ್ಟ್ ಗೆ ದೂರು!
ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಕಮಲ್ ನಾಥ್ ವಿರುದ್ಧ ಬಿಹಾರದ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ಪಾಟ್ನಾ: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಕಮಲ್ ನಾಥ್ ವಿರುದ್ಧ ಬಿಹಾರದ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ಸಿಎಂ ಆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಮಲ್ ನಾಥ್, ವಲಸೆ ನೌಕರರ ಕುರಿತು ನೀಡಿದ ಹೇಳಿಕೆ ಬಿಹಾರ ಹಾಗೂ ಉತ್ತರ ಪ್ರದೇಶದ ಜನತೆ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂಬ ಅಸಮಾಧಾನ ವ್ಯಕ್ತವಾಗಿತ್ತು. ಕಮಲ್ ನಾಥ್ ಹೇಳಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ತಮನ್ನಾ ಹಶ್ಮಿ ಬಿಹಾರದ ಕೋರ್ಟ್ ನಲ್ಲಿ ಐಪಿಸಿ ಸೆಕ್ಷನ್ 153 (ಗಲಭೆ ಉಂಟು ಮಾಡಲು ಉದ್ದೇಶ ಪೂರ್ವಕ ಪ್ರಚೋದನೆ) 504 (ಶಾಂತಿಯನ್ನು ಕದಡಲು ಉದ್ದೇಶಪೂರ್ವಕವಾಗಿ ಪ್ರಚೋದನೆ ಉದ್ದೇಶ ದೂರು ದಾಖಲಿಸಿದ್ದಾರೆ.
ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ ಆದರೆ ಅದರಲ್ಲಿ ಕೆಲಸ ಮಾಡಲು ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಜನರು ಬರುತ್ತಾರೆ. ನಾವು ಅವರನ್ನು ಟೀಕಿಸುವುದಿಲ್ಲ. ಆದರೆ ಮಧ್ಯಪ್ರದೇಶದ ಯುವಕರು ಇದರಿಂದ ಅವಕಾಶ ವಂಚಿತರಾಗಿದ್ದಾರೆ ಎಂದು ಕಮಲ್ ನಾಥ್ ಹೇಳಿದ್ದರು. ಕಮಲ್ ನಾಥ್ ಅವರ ಈ ಹೇಳಿಕೆ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಿದೆ.