ನವದೆಹಲಿ: ಎನ್ ಡಿಎ ಮೈತ್ರಿಕೂಟದ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಆರ್ ಎಲ್ ಎಸ್ ಪಿ ನಾಯಕ ಉಪೇಂದ್ರ ಕುಶ್ವಾಹ ಈಗ ಯುಪಿಎ ಮೈತ್ರಿಕೂಟ ಸೇರಿದ್ದಾರೆ.
ಬಿಹಾರದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ನೇತೃತ್ವ ವಹಿಸಿರುವ ಉಪೇಂದ್ರ ಕುಶ್ವಾಹ ಯುಪಿಎ ಸೇರಿರುವುದು 2019 ರ ಲೋಕಸಭಾ ಚುನಾವಣೆ ವೇಳೆ ಮಹಾಮೈತ್ರಿಕೂಟ ರಚನೆಗೆ ಮತ್ತಷ್ಟು ಬಲ ದೊರೆತಂತಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಮುಖವಾಗಿ, ಉಪೇಂದ್ರ ಕುಶ್ವಾಹ ಬಿಹಾರದವರಾಗಿದ್ದು, ಯುಪಿಎ ಜೊತೆ ಕೈ ಜೋಡಿಸುತ್ತಿರುವುದರಿಂದ ಬಿಹಾರದಲ್ಲಿ ಬಲಿಷ್ಠವಾಗಿರುವ ಬಿಜೆಪಿ ನೇತೃತ್ವದ ಎನ್ ಡಿಎಗೆ ಉತ್ತಮ ಪೈಪೋಟಿ ನೀಡಬಹುದೆಂಬ ನಿರೀಕ್ಷೆ ಇದೆ.
ಬಿಹಾರದ ಮತ್ತೊಂದು ಪಕ್ಷವಾಗಿರುವ ಮಾಂಝಿ ನೇತೃತ್ವದ ಹಿಂದೂಸ್ಥಾನಿ ಅವಾಮ್ ಮೋರ್ಚಾ ಸಹ ಯುಪಿಎ ಜೊತೆ ಕೈಜೋಡಿಸಿದೆ.