ನವದೆಹಲಿ: ಪ್ರತಿಪಕ್ಷಗಳ ತೀವ್ರ ಕೋಲಾಹಲದ ಹಿನ್ನಲೆಯಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಡಿಸೆಂಬರ್ 27ರವರೆಗೆ ಮುಂದೂಡಿದ್ದಾರೆ.
ಇಂದು ಬೆಳಗ್ಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಎಐಎಡಿಎಂಕೆ, ಟಿಡಿಪಿ ಮತ್ತು ಕಾಂಗ್ರೆಸ್ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದರಿಂದ ಸ್ಪೀಕರ್ ಕಲಾಪವನ್ನು ಮುಂದೂಡಿದರು.
ಕ್ರಿಸ್ಮಸ್ ಹಿನ್ನಲೆಯಲ್ಲಿ ಡಿಸೆಂಬರ್ 24 ಮತ್ತು ಡಿಸೆಂಬರ್ 26ರಂದು ಕಲಾಪಕ್ಕೆ ರಜೆ ನೀಡಲಾಗಿದ್ದು, ಡಿಸೆಂಬರ್ 27ರಂದು ಮತ್ತೆ ಸಂಸತ್ ಕಲಾಪ ಆರಂಭವಾಗಲಿದೆ.
ಕ್ರಿಸ್ಮಸ್ ಗಾಗಿ ಡಿಸೆಂಬರ್ 24 ಮತ್ತು 26ರಂದು ಕಲಾಪಕ್ಕೆ ರಜೆ ನೀಡಬೇಕು ಎಂದು ಹಲವು ಸದಸ್ಯರು ಮನವಿ ಮಾಡಿಕೊಂಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೆಘವಾಲ್ ಅವರು ತಿಳಿಸಿದರು.
ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸುಳ್ಳು ಮಾಹಿತಿ ನೀಡಿದೆ. ಹೀಗಾಗಿ ರಾಫೆಲ್ ಹಗರಣವನ್ನು ಜೆಪಿಸಿ ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ಸಂಸದರು ಒತ್ತಾಯಿಸಿದರು.
ಎಐಎಡಿಎಂಕೆ ಸಂಸದರು ಮೇಕೆದಾಟು ವಿಚಾರವಾಗಿ ಹಾಗೂ ಟಿಡಿಪಿ ಸಂಸದರು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.