ನವದೆಹಲಿ: ಕರ್ನಾಟಕದ ಮಹತ್ವಕಾಂಕ್ಷೆಯ ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಿರುವ ತಮಿಳುನಾಡು ಸರ್ಕಾರದ ನಡೆಯನ್ನು ವಿರೋಧಿಸಿ ರಾಜ್ಯ ಸಂಸದರು ಇಂದು ಸಂಸತ್ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.
ಮೇಕೆದಾಟು ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ಹಸಿರು ನಿಶಾನೆ ತೋರಬೇಕು ಎಂದು ಒತ್ತಾಯಿಸಿ ರಾಜ್ಯದ ಸಂಸದರು ಪಕ್ಷಾತೀತವಾಗಿ ಧರಣಿ ನಡೆಸಿದರು.
ಸಂಸದರಾದ ಡಿ. ಕೆ. ಸುರೇಶ್, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಪ್ರಕಾಶ್ ಹುಕ್ಕೇರಿ, ಸುರೇಶ್ ಅಂಗಡಿ, ಶಿವರಾಮೇಗೌಡ, ಧೃುವನಾರಾಯಣ್, ಜಿ.ಎಂ. ಸಿದ್ದೇಶ್ವರ್, ರಾಜ್ಯಸಭಾ ಸದಸ್ಯರಾದ ಬಿ. ಕೆ. ಹರಿಪ್ರಸಾದ್, ರಾಜೀವ್ ಗೌಡ, ಡಾ. ಎಲ್. ಹನುಮಂತಯ್ಯ, ಜಿ. ಸಿ. ಚಂದ್ರಶೇಖರ್, ಸಿ, ನಸೀರ್ ಅಹ್ಮದ್, ಉಪೇಂದ್ರ ರೆಡ್ಡಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮೇಕೆದಾಟು ಯೋಜನೆ ರಾಜ್ಯಕ್ಕೆ ಬೇಕು ಬೇಕು ಎಂದು ಘೋಷಣಾ ಫಲಕ ಪ್ರದರ್ಶಿಸಿದ ಪ್ರತಿಭಟನಾಕಾರರು, ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದಾಗ್ಯೂ, ತಮಿಳುನಾಡಿನ ಸಂಸದರು ಹಾಗೂ ಅಲ್ಲಿನ ಸರ್ಕಾರ ವಿನಾಕಾರಣ ಯೋಜನೆಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
Advertisement