ನವದೆಹಲಿ: ವಿವಾದಾತ್ಮಕ ತ್ರಿವಳಿ ತಲಾಕ್ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು ಮಸೂದೆ ಕುರಿತ ಚರ್ಚೆಗೆ ವಿರೋಧ ಪಕ್ಷಗಳು ಅವಕಾಶ ನೀಡಲಿಲ್ಲ.ಮಸೂದೆಯನ್ನು ಕಾನೂನು ಕರಡು ಸಮಿತಿಯ ಪರಿಶೀಲನೆಗೆ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.
ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿದ್ದುಪಡಿ ಮಾಡಲಾದ 2018 ರ ಮುಸ್ಲಿಂ ಮಹಿಳಾ (ಮದುವೆ ಹಕ್ಕುಗಳ ರಕ್ಷಣೆಯ) ಮಸೂದೆಯನ್ನು ಚರ್ಚಿಸಲು ಮುಂದಾದಾಗ ವಿರೋಧ ಪಕ್ಷಗಳು ಸಮಿತಿಯ ಪರಿಶೀಲನೆಗಾಗಿನ ತಮ್ಮ ನಿರ್ಧಾರಕ್ಕೆ ಕಟ್ಟುಬಿದ್ದು ವಿರೋಧ ವ್ಯಕ್ತಪಡಿಸಿದವು.
ಈ ವಿಚಾರದಲ್ಲಿ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವಿನ ಘರ್ಷಣೆಯಲ್ಲಿಯೇ ದಿನದ ಸಮಯ ಮುಗಿದು ಹೋಗಿದ್ದು ಯಾವುದೇ ಪ್ರಮುಖ ವಿಷಯಗಳ ಚರ್ಚ್ಗೆ ಅವಕಾಶ ಸಿಗಲಿಲ್ಲ.
ಸದ್ಯ ದಿನದ ಕಲಾಪ ಮುಂದೂಡಿಕೆಯಾಗಿದ್ದು ಮತ್ತೆ ಜನವರಿ 2, 2019ರಂದು ಮಸೂದೆಯು ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ.
ಇದಕ್ಕೆ ಮುನ್ನ ಇಂದು ಸದನ ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಕಾವೇರಿ ವಿವಾದದ ಸಂಬಂಧ ಎಐಎಡಿಎಂಕೆ ಸದಸ್ಯರು ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಸದನದ ಕಲಾಪ ಮುಂದೂಡಲ್ಪಟ್ಟಿತ್ತು.
ರಾಜ್ಯಸಭೆ ಪ್ರತಿಪಕ್ಷ ನಾಯಕ ಕ ಗುಲಾಮ್ ನಬಿ ಆಜಾದ್ ಮಾತನಾಡಿ ಈ ಮಸೂದೆಯು ಬಹಳ ನಿರ್ಣಾಯಕ ಮತ್ತು ಹೆಚ್ಚಿನ ಪರಿಶೀಲನೆಗೆ ಒಳಗಾಗಬೇಕಿದ್ದು ಪರಿಶೀಲನೆಗಾಗಿ ಸಮಿತಿಗೆ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ. ಸದನದಲ್ಲಿದ್ದ ಅರ್ಧಕ್ಕೂ ಹೆಚ್ಚಿನ ಸದಸ್ಯರು ಅವರ ಮಾತಿಗೆ ಅನುಮೋದಿಸಿದ್ದರು.
ಸರ್ಕಾರವು ಸಂಪ್ರದಾಯವನ್ನು ಮುರಿಯಲು ಹೊರಟಿದೆ, ಯಾವುದೇ ಮಸೂದೆ ಕಾನೂನು ಆಗುವುದಕ್ಕೆ ಮುನ್ನ ಆಯ್ದ ಸಮಿತಿಗಳ ಮುಂದೆ ಪರಿಶೀಲನೆಗೆ ಒಳಪಡಬೇಕು, ಆದರೆ ಮೋದಿ ಸರ್ಕಾರ ಈ ಸಂಪ್ರದಾಯವನ್ನು ಮುರಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಗೋಯೆಲ್ ಸರ್ಕಾರ ಈ ವಿಚಾರದ ಚರ್ಚೆಗೆ ಸಿದ್ದವಿದೆ ಎಂದು ಹೇಳಿದ್ದಾರೆ. ಶಾಸನವನ್ನು ಅಂಗೀಕರಿಸುವಲ್ಲಿ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ಎಂದು ಆರೋಪಿಸಿದರು.