ಮಾಣಿಕ್ ಸರ್ಕಾರ್ ನೇತೃತ್ವದ ಭ್ರಷ್ಟ, ಹಿಂಸಾತ್ಮಕ ಸರ್ಕಾರ : ಬಿಜೆಪಿ ಆರೋಪ
ಅಗರ್ತಲಾ: ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎಂದೇ ಹೆಸರಾಗಿರುವ ತ್ರಿಪುರಾದ ಮಾಣಿಕ್ ಸರ್ಕಾರ್ ನೇತೃತ್ವದ ಸರ್ಕಾರ ಭ್ರಷ್ಟ ಮತ್ತು ಹಿಂಸಾತ್ಮಕ ಸರ್ಕಾರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾದವ್ ಆರೋಪಿಸಿದ್ದಾರೆ.
ತ್ರಿಪುರಾ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಣಿಕ್ ಸರ್ಕಾರ್ ಮಾತ್ರ ಹುದ್ದೆ ಪಡೆದಿದ್ದು ಆ ರಾಜ್ಯದ ಉಳಿದೆಲ್ಲಾ ಜನ ಬಡತನ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
25 ವರ್ಷಗಳಿಂದ ಸಿಪಿಐಎಂ ನ ದುರಾಡಳಿತದಿಂದ ತ್ರಿಪುರಾ ರಾಜ್ಯದ ಜನತೆ ಬೇಸತ್ತಿದ್ದು, ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಪಾದಿಸಿದ್ದಾರೆ.
ಫೆಬ್ರುವರಿ 18ರಂದು ತ್ರಿಪುರಾ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.ಸಿಪಿಐಎಂ ಕಳೆದ 25 ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಮಾಣಿಕ್ ಸರ್ಕಾರ 19 ವರ್ಷಗಳಿಂದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.