ಇಟಾನಗರ: ಸೂರ್ಯ ಉದಯಿಸುವ ಅರುಣಾಚಲ ಪ್ರದೇಶದಿಂದ ಮುಂದಿನ ದಿನಗಳಲ್ಲಿ ಬೆಳವಣಿಗೆಯ ಕಿರಣಗಳು ಬೆಳಗಲಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಇಂದು ದಾರ್ಜಿ ಖಾಂಡು ರಾಜ್ಯ ಕನ್ವೆನ್ಶನ್ ಸೆಂಟರ್ ನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರುಣಾಚಲ ಪ್ರದೇಶಕ್ಕೆ ಹೋಗಿ ಈ ಕನ್ವೆನ್ಶನ್ ಸೆಂಟರ್ ನಲ್ಲಿ ಪ್ರಮುಖ ಸಭೆಗಳನ್ನು ನಡೆಸಿ ಎಂದು ನಾನು ವೈಯಕ್ತಿಕವಾಗಿ ಜನರಿಗೆ ಹೇಳುತ್ತೇನೆ ಎಂದರು.
ಈ ಕನ್ವೆನ್ಶನ್ ಸೆಂಟರ್ ನಗರದ ಪ್ರಮುಖ ಕೇಂದ್ರವಾಗಿ ಮಾರ್ಪಡಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮಾತ್ರ ಏಕೆ ಸಭೆಗಳನ್ನು ನಡೆಸಬೇಕು? ನಾವು ಎಲ್ಲಾ ರಾಜ್ಯಗಳಿಗೆ ಹೋಗಬೇಕು, ಹೀಗಾಗಿ ನಾನು ಶಿಲ್ಲಾಂಗ್ ಗೆ ಈಶಾನ್ಯ ಭಾರತ ಮಂಡಳಿ ಸಭೆಯಲ್ಲಿ ಭಾಗವಹಿಸಲು ಬಂದೆ. ಸಿಕ್ಕಿಂನಲ್ಲಿ ಕೃಷಿಗೆ ಸಂಬಂಧಪಟ್ಟ ಪ್ರಮುಖ ಸಭೆಯೊಂದು ನಡೆಯಿತು ಎಂದು ಪ್ರಧಾನಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ, ರಾಜ್ಯ ನಾಗರಿಕ ಸಚಿವಾಲಯ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.ಟೊಮೊ ರಿಬಾ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶೈಕ್ಷಣಿಕ ವಿಭಾಗ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ದೇಶದ ಜನತೆಗೆ ಅಗ್ಗದ ದರದಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಬೇಕು. ಇದಕ್ಕಾಗಿ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ನಾವು ಕಾರ್ಯಾರಂಭ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಹೆಚ್ಚೆಚ್ಚು ವೈದ್ಯಕೀಯ ಶಿಕ್ಷಣ ಪಡೆದರೆ ಆ ಪ್ರದೇಶದಲ್ಲಿನ ಜನತೆಗೆ ಉತ್ತಮ ಆರೋಗ್ಯ ಸೇವೆ ದೊರಕಲು ಸಹಾಯಕವಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಈಶಾನ್ಯ ಭಾರತ ಮಂಡಳಿ ಸಭೆಯಲ್ಲಿ ಭಾಗವಹಿಸಿದ ಕೊನೆಯ ಪ್ರಧಾನಿ ಮೊರಾರ್ಜಿ ದೇಸಾಯಿ ಆಗಿದ್ದರು. ನಂತರ ಬೇರೆ ಯಾವುದೇ ಪ್ರಧಾನಿ ಭಾಗವಹಿಸಿರಲಿಲ್ಲ. ಅವರೆಲ್ಲರೂ ತುಂಬಾ ಬ್ಯುಸಿಯಾಗಿದ್ದರು. ಆದರೆ ನಾನಿಲ್ಲಿ ಇಲ್ಲಿನ ಜನರಿಗಾಗಿ ಬಂದಿದ್ದೇನೆ ಎಂದು ಪ್ರಧಾನಿ ತಮ್ಮ ಭೇಟಿಯನ್ನು ಉದ್ದೇಶಿಸಿ ಹೇಳಿದರು.