ನವದೆಹಲಿ: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂವಿಗೆ ಕೆನಡಾ ಹೈ ಕಮೀಷನರ್ ನಿನ್ನೆ ಆಯೋಜಿಸಿದ್ದ ಔತಣಕೂಟದಲ್ಲಿ ಖಲಿಸ್ತಾನ್ ಉಗ್ರ ಜಸ್ಪಾಲ್ ಅತ್ವಾಲ್ ಪಾಲ್ಗೊಂಡಿರುವ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಸ್ಟಿನ್ ಟ್ರುಡ್ಯೂ, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ತಾವೂ ಅಂತಹ ಆಹ್ವಾನವನ್ನು ನೀಡಿರಲಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಕೆನಡಾ ಸಂಸತ್ತಿನ ಸದಸ್ಯ ರಂದೀಪ್ ಎಸ್, ಸರಾಯ್ ಅತ್ವಾಲ್ ನನ್ನು ಔತಣಕ್ಕೂ ಆಹ್ವಾನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ತಾವೇ ಅವರನ್ನು ಆಹ್ವಾನಿಸಿರುವುದಾಗಿ ಸಂಪೂರ್ಣ ಹೊಣೆ ಹೊರುವುದಾಗಿ ಸರಾಯ್ ತಿಳಿಸಿದ್ದಾರೆ ಎಂದು ಕೆನಡಾ ಮೂಲದ ಪತ್ರಕರ್ತರೊಬ್ಬರು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಇದು ಹೇಗೆ ನಡೆಯಿತು ಎಂಬ ಬಗ್ಗೆ ತಮಗೆ ಏನೂ ಗೊತ್ತಿಲ್ಲ.
ಉಗ್ರ ಜಸ್ಪಾಲ್ ಅತ್ವಾಲ್ ಹಾಜರಿ ಹಾಗೂ ವೀಸಾದ ಬಗ್ಗೆ ತಿಳಿಯಬೇಕಾಗಿದೆ. ಈ ಸಂಬಂಧ ನಮ್ಮ ಕಮಿಷನ್ ನಿಂದ ಮಾಹಿತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಜಸ್ಪಾಲ್ ಅತ್ವಾಲ್ ಖಲಿಸ್ತಾನ್ ಉಗ್ರನೆಂಬ ಆರೋಪವಿದೆ. ನಿಷೇಧಿತ ಅಂತಾರಾಷ್ಟ್ರೀಯ ಸಿಖ್ ಯುವ ಒಕ್ಕೂಟದಲ್ಲಿ ಆತ ಸಕ್ರೀಯವಾಗಿದ್ದು, ಪಂಜಾಬ್ ಸಚಿವ ಮಲ್ಕಿಯಾತ್ ಸಿಂಗ್ ಸಿಧು ಅವರ ಕೊಲೆಗೆ ಯತ್ನಿಸಿದೆ ಆರೋಪವಿದೆ.
ಕೆನಡಾದಲ್ಲಿನ ಸಿಖ್ ರ ಪ್ರತ್ಯೇಕತೆ ಕುರಿತಂತೆ ಉತ್ತರಿಸುವಂತೆ ಟ್ರೂಡೂ ಮೇಲೆ
ಒತ್ತಡಗಳು ಕೇಳಿಬರುತ್ತಿವೆ.
Advertisement