ನವದೆಹಲಿ: ಲೋಕಪಾಲ್ ನೇಮಕ ವಿಚಾರದಲ್ಲಿ ವಿಳಂಬ ದೊರಣೆ ಅನುಸರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಲೋಕಪಾಲ್ ಮಸೂದೆ ಜಾರಿಯಾಗಿ ನಾಲ್ಕು ವರ್ಷ ಕಳೆದರೂ ಸಂಸ್ಥೆಗೆ ಕೇಂದ್ರ ಸರ್ಕಾರ ಲೋಕಪಾಲರನ್ನು ನೇಮಕ ಮಾಡಿಲ್ಲ ಎಂದಿರುವ ರಾಹುಲ್ ಗಾಂಧಿ, ಲೋಕಪಾಲರನ್ನು ನೇಮಕ ಮಾಡಲು ನಿಮಗೆ ಇನ್ನು ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇದು ಸುಳ್ಳುತನದ ಪರಮಾವಧಿ ಎಂದು ಟ್ವೀಟರ್ ನಲ್ಲಿ ಕಿಡಿ ಕಾರಿದ್ದಾರೆ.
2013ರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಅವರ ಸತ್ಯಾಗ್ರಹದ ಫಲವಾಗಿ, ಜನಲೋಕ್ ಪಾಲ್ ಮಸೂದೆಗೆ ಸಂಸತ್ತಿನ ಅಂಗೀಕಾರ ಸಿಕ್ಕಿದೆ. ಹೀಗೆ, ಸಂಸತ್ತಿನ ಒಪ್ಪಿಗೆ ಪಡೆದು ನಾಲ್ಕು ವರ್ಷದ ನಂತರವೂ ಮಸೂದೆ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ.
2014ರ ಮಹಾ ಚುನಾವಣೆಯ ವೇಳೆ ಜನಲೋಕಪಾಲ್ ಮಸೂದೆ ಜಾರಿಗೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.